Publish Date: Wed, 17 Dec 2025 (14:25 IST)
Updated Date: Wed, 17 Dec 2025 (14:28 IST)
ಬೆಳಗಾವಿ: ಅನುದಾನ ವಿಚಾರದಲ್ಲಿ ವಿಪಕ್ಷ ಶಾಸಕರ ಕ್ಷೇತ್ರ ಮತ್ತು ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ತಾರತಮ್ಯ ಮಾಡುತ್ತಿರುವುದು ಯಾಕೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಫುಲ್ ಗರಂ ಆಗಿದ್ದಾರೆ.
ನಿನ್ನೆ ಸದನದಲ್ಲಿ ಶಾಸಕ ರಂಗನಾಥ್ ಅನುದಾನ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದ್ದರು. ಅವರ ಹೇಳಿಕೆಯನ್ನು ಉಲ್ಲೇಖಿಸಿ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಅಧಿಕಾರದಲ್ಲಿರುವ ಆಡಳಿತ ಪಕ್ಷಗಳು ವಿರೋಧ ಪಕ್ಷಗಳ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ತಾರತಮ್ಯ ಮಾಡುವುದು ಸಾಮಾನ್ಯ.
ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರಿಬ್ಬರ ನಡುವಿನ ಬಣ ಬಡಿದಾಟ ಯಾವ ಮಟ್ಟದ ತಾರಕಕ್ಕೇರಿದೆ ಎಂದರೆ ಕಾಂಗ್ರೆಸ್ ಶಾಸಕರ ಕ್ಷೇತಗಳಲ್ಲಿಯೇ ಅನುದಾನ ತಾರತಮ್ಯದ ಬಗ್ಗೆ ಸದನದಲ್ಲಿ ಆರೋಪ ಕೇಳಿ ಬರುತ್ತಿದೆ.
ಯಾವುದೇ ರಾಗ ದ್ವೇಷವಿಲ್ಲದೆ, ಇಡೀ ರಾಜ್ಯಕ್ಕೆ ನಿಷ್ಪಕ್ಷಪಾತವಾಗಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತೇನೆ ಎಂದು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ತಮ್ಮದೇ ಪಕ್ಷದ ವಿರೋಧಿ ಬಣದ ಶಾಸಕರಿಗೆ ಈ ರೀತಿ ತಾರತಮ್ಯ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.