Publish Date: Tue, 11 Aug 2026 (15:36 IST)
Updated Date: Tue, 11 Aug 2026 (15:41 IST)
ಬೆಂಗಳೂರು: ರಾಜ್ಯದಲ್ಲಿ ಗೂಂಡಾಗಿರಿ ಸರಕಾರ ಅಧಿಕಾರದಲ್ಲಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಉಪಸ್ಥಿತಿಯಲ್ಲಿ ಅವರು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಗೂಂಡಾಗಿರಿ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ನಾಳೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾ ಸಂದರ್ಶನ ಮಾಡಲಿದ್ದಾರೆ. ಅಲ್ಲಿ ನಮ್ಮ ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಿಸಿದರು. ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾರ್ಯಕರ್ತರು, ಜನಪ್ರತಿನಿಧಿಗಳು ಧರಣಿ ಮಾಡಲಿದ್ದಾರೆ. 13ರಂದು ಸದನ ಪ್ರಾರಂಭವಾಗಲಿದೆ. ಬಳಿಕ ಸ್ಪೀಕರ್ ಚುನಾವಣೆ ನಡೆಯಲಿದೆ. ಸೋಮವಾರದಿಂದ ಅಧಿವೇಶನ ಇದೆ. ವಿಧಾನಸಭೆ ಒಳಗಡೆಯೂ ನಾಗೇಂದ್ರರ ವಿಚಾರ ಪ್ರಸ್ತಾಪಿಸಿ ರಾಜೀನಾಮೆಗೆ ಆಗ್ರಹಿಸಲಿದ್ದೇವೆ ಎಂದು ತಿಳಿಸಿದರು.
ನಾಗೇಂದ್ರ ವಿರುದ್ಧ ಕೇಸ್ ಖುಲಾಸೆ ಆಗಿದೆಯೇ? ಹಾಗಿದ್ದರೆ ಮತ್ತೆ ಸಚಿವಸಂಪುಟಕ್ಕೆ ತೆಗೆದುಕೊಳ್ಳಬಹುದಿತ್ತು. ಈಶ್ವರಪ್ಪ ಅವರ ವಿಚಾರದಲ್ಲಿ ಕೈಕೈ ಮಿಲಾಯಿಸಿದ್ದರು. ಲಕ್ಷ್ಮಣ ಸವದಿ ವಿಚಾರದಲ್ಲೂ ವಿಡಿಯೋ ನೋಡಿ ಸಮಸ್ಯೆ ಆಗಿತ್ತು. ಅವರನ್ನು ಸಂಪುಟಕ್ಕೆ ತೆಗೆದುಕೊಂಡಿದ್ದೇವಾ? ನೀವು ಹೇಗೆ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಿದ್ದೀರಿ ಎಂದು ಕೇಳಿದರು. ನನಗೆ ಗೊತ್ತಿರುವ ಪ್ರಕಾರ ಮಿಸ್ಟರ್ ನಾಗೇಂದ್ರ ಪ್ರತಿದಿನವೂ ಕೋರ್ಟಲ್ಲೇ ಇರಬೇಕು. ಅವರ ವಿರುದ್ಧ ಹಲವಾರು ಕೇಸುಗಳು ಇವೆ ಎಂದು ಗಮನ ಸೆಳೆದರು.
ಅಸೆಂಬ್ಲಿಗೆ ಬರುವುದು ಯಾವಾಗ?
ಸಿಬಿಐ, ಇ.ಡಿ, ಸಿಐಡಿ, ಲೋಕಾಯುಕ್ತದ 31 ಕೇಸುಗಳಿವೆ ಎಂದು ವಿವರ ನೀಡಿದರು. ಚೆನ್ನೈನಲ್ಲೂ ಮೊಕದ್ದಮೆಗಳಿವೆ ಎಂದು ತಿಳಿಸಿದರು. ತಿಂಗಳಿಗೆ 31 ದಿನ ಇವೆ. 31 ದಿನ 31 ಕೇಸುಗಳಿವೆ ಎಂದು ವಿವರಿಸಿದರು. ಆ ಮನುಷ್ಯ ಅಸೆಂಬ್ಲಿಗೆ ಬರುವುದು ಯಾವಾಗ? ಖಾತೆ ನೋಡುವುದು ಯಾವಾಗ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನವರಿಗೆ ಮಾನ ಮರ್ಯಾದೆ ಇದೆಯೇ? ಅವರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡಿ. ಅವರು ಕೇಸುಗಳಿಗೆ ಓಡಾಡಲಿ ಎಂದು ವ್ಯಂಗ್ಯವಾಡಿದರು. ವಾಲ್ಮೀಕಿ ನಿಗಮದ 89 ಕೋಟಿಯಷ್ಟೇ ತಿಂದಿರುವುದೆಂದು ಸಿದ್ದರಾಮಯ್ಯನವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ