Select Your Language

Notifications

webdunia
webdunia
webdunia
webdunia

ನೇಕಾರರಿಗೆ ಆರ್ಥಿಕ ಶಕ್ತಿ ತುಂಬಿದ ಮೋದಿಜೀ ಸರ್ಕಾರ: ವಿಜಯೇಂದ್ರ

BY Vijayendra
ಬೆಂಗಳೂರು: ನೇಕಾರರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸವನ್ನು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜೀ ಅವರ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ವೃತ್ತಿಪರ ನೇಕಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈಗಿನ ಕಾಂಗ್ರೆಸ್ ಸರ್ಕಾರ ಏನೇ ಬೊಬ್ಬೆ ಹೊಡೆದರೂ ಮತ್ತೆ  ಅಧಿಕಾರಕ್ಕೆ ಬರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆಗ ನಮ್ಮ ಸರ್ಕಾರ ನೇಕಾರರ ಕಲ್ಯಾಣಕ್ಕೆ ಸಾಕಷ್ಟು ಯೋಜನೆ ರೂಪಿಸಿ ಅನುಕೂಲ ಮಾಡಿಕೊಡಲಿದೆ ಎಂದು ಭರವಸೆ ನೀಡಿದರು. 
 
ನೇಕಾರ ಸಮುದಾಯಕ್ಕೆ ಕೇಂದ್ರ ಸರ್ಕಾರ ಶಕ್ತಿ ತುಂಬುಲು ಹಲವಾರು ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗಲೂ ನೇಕಾರರಿಗೆ ನೆರವು ನೀಡಿದ್ದರು. ಬಿಜೆಪಿ ಸರ್ಕಾರ ನೇಕಾರರಿಗೆ ಧ್ವನಿಯಾಗಿತ್ತು ಎಂದು ವಿಶ್ಲೇಷಿಸಿದರು. ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕೌಶಲ ಹೆಚ್ಚಳಕ್ಕೆ, ಮಾರುಕಟ್ಟೆ ವಿಸ್ತರಣೆಗೆ ಕೇಂದ್ರ ಸರ್ಕಾರ ಹಲವಾರು ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಿತು. ರಾಜ್ಯ ಸರ್ಕಾರದೊಂದಿಗೆ ಪಿಎಂ ಮಿತ್ರ ಪಾರ್ಕ್ ಯೋಜನೆ ಇವುಗಳಲ್ಲಿ ಮಹತ್ವದ್ದು. ನೇಕಾರಿಕೆ ಕೇವಲ ವೃತ್ತಿಯಲ್ಲ. ಅದೊಂದು ಕಲೆ ಎಂದು ಕೇಂದ್ರ ಸರ್ಕಾರ ಪರಿಭಾವಿಸಿದೆ ಎಂದು ಹೇಳಿದರು. 
 
ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ನೇಕಾರರಿಗೆ ಏನೂ ಮಾಡಲಿಲ್ಲ. ಮೋದಿ ಜೀ ಅವರು, ನೇಕಾರರ ವೃತ್ತಿ ಗುರುತಿಸಿ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಘೋಷಣೆ ಮಾಡಿ ಇದರ ಮೂಲಕ ಕೌಶಲ ಉಳಿಸುವ ಇಚ್ಛಾಶಕ್ತಿ ಹೊಂದಿದ್ದಾರೆ ಎಂದು ನುಡಿದರು. 
 
ಉತ್ತರ ಕರ್ನಾಟಕ ಪ್ರವಾಸದ ವೇಳೆ ನೇಕಾರರ ಕುಟುಂಬ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಕೈಮಗ್ಗಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಯಾವುದೇ ನೆರವು ನೀಡಲಿಲ್ಲ. ಆದರೆ ಯಡಿಯೂರಪ್ಪ ಅವರು, ಅನ್ನ ನೀಡುವ ರೈತ ಒಂದು ಕಣ್ಣಾದರೆ ನೇಕಾರರು ಮತ್ತೊಂದು ಕಣ್ಣು ಎಂದು ಹೇಳಿದ್ದರು. ಕೇವಲ ಭಾಷಣ ಮಾಡದೇ ಅವರ ಕಲ್ಯಾಣಕ್ಕೆ ಯೋಜನೆ ರೂಪಿಸಿದ್ದರು. ಮುಂದೆ ನಮ್ಮ ಸರ್ಕಾರ ಬಂದರೆ ಕೈಮಗ್ಗಗಳನ್ನು ಉಳಿಸಲು ಕೆಲಸ ಮಾಡಲಿದೆ ಎಂದು ತಿಳಿಸಿದರು. 
 
ಉದ್ಯೋಗ ಎಂದರೆ ಕೇವಲ ಎಂಜಿನಿಯರಿಂಗ್, ವೈದ್ಯಕೀಯ ಪದವಿ ಪಡೆದವರು, ಐಟಿ ಬಿಟಿ ಉದ್ಯೋಗ ಮಾತ್ರವಲ್ಲ. ಎಲ್ಲರೂ ಪದವಿ ಪಡೆಯಲು ನಮ್ಮ ದೇಶದಲ್ಲಿ ಕಷ್ಟ. ಸಾಕಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಯಾವುದೇ ಸರ್ಕಾರ ಎಲ್ಲರಿಗೂ ಉದ್ಯೋಗ ಸೃಷ್ಟಿಸಲು ಸಾಧ್ಯವಿಲ್ಲ. ಗ್ರಾಮೀಣ ಭಾಗದಲ್ಲಿ ಬಡತನ ಇದೆ. ಇಂತಹ ಸಂದರ್ಭದಲ್ಲಿ ಕೈಮಗ್ಗಗಳು ಉದ್ಯೋಗ ನೀಡಬಲ್ಲವು. ಆದರೆ ಸರ್ಕಾರಗಳು ಈ ಕ್ಷೇತ್ರಕ್ಕೆ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು. 
 
ಕುಲಕಸುಬುಗಳಿಗೆ ಆರ್ಥಿಕ ಶಕ್ತಿ  ತುಂಬಬೇಕು. ಬ್ಯಾಂಕ್ ಸಾಲ, ವಿದುತ್ ಸಬ್ಸಿಡಿ ಕೊಡಿ ಎಂದು ನೇಕಾರರು ಕೇಳುತ್ತಿದ್ದಾರೆ. ರಾಜ್ಯ ಸರ್ಕಾರ ಸಹಕಾರ ಕೊಟ್ಟು ಈ ಕಲೆಯನ್ನು, ವೃತ್ತಿಯನ್ನು ಉಳಿಸಬೇಕು. ಯಾವುದೇ ಉದ್ಯೋಗ ಲಾಭದಾಯಕ ಎಂದು ಅನಿಸಿದರೆ ಮುಂದಿನ ತಲೆಮಾರು ಸಹ ಅದನ್ನು ಮುಂದುವರಿಸುತ್ತಾರೆ. ಮಾರುಕಟ್ಟೆ ಸಿಕ್ಕರೆ, ಲಾಭವಾದರೆ ಹೆಚ್ಚು ಹೆಚ್ಚು ಜನ ಈ ಕಸುಬನ್ನು ಮಾಡುತ್ತಾರೆ ಎಂದು ತಿಳಿಸಿದರು. 
 
 
ಮುಂದಿನ ಸ್ವಾತಂತ್ರ್ಯ ದಿನದ ಅಂಗವಾಗಿ ಮನೆಮನೆಗಳ ಮೇಲೆ ತ್ರಿವಣ ಧ್ವಜ ಹಾರಬೇಕು ಎಂದು ಪ್ರಧಾನಿ ಮೋದಿ ಅವರು ಬಯಸಿದ್ದಾರೆ. ಇದಕ್ಕಾಗಿ ಕೋಟಿಗಟ್ಟಲೆ ಧ್ವಜ ಬೇಕು. ನಾವುಗಳು ಮನೆ ಮೇಲೆ ಧ್ವಜ ಹಾರಿಸಿದರೆ ಸಾಕಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಮೋದಿಯವರು ಖಾದಿಗೆ ಒತ್ತು ನೀಡಿದರು. ಈಗ ಖಾದಿಯಿಂದಲೂ ಕೋಟ್ಯಂತರ ವಹಿವಾಟು ನಡೆಯುತ್ತಿದೆ ಎಂದು ನೆನಪಿಸಿದರು. 
 
ವಿಕಸಿತ ಭಾರತವಾಗಲು ಕೇವಲ ನಗರ ಅಭಿವೃದ್ಧಿ ಆದರೆ ಸಾಲದು ಹಳ್ಳಿಗಳೂ ಉದ್ದಾರ ಆಗಬೇಕು ಎಂದು ಮೋದಿಜೀ ಅವರು ಬಯಸಿದ್ದಾರೆ. ಆದ್ದರಿಂದಲೇ 11 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಿಸಿದ್ದಾರೆ. 25 ಕೋಟಿಗೂ ಹೆಚ್ಚು ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ.  12 ಕೋಟಿಗೂ ಹೆಚ್ಚು ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದಾರೆ. ಇದರಿಂದ ಸಾಕಷ್ಟು ಅರಣ್ಯ ಉಳಿದಿದೆ. ಮುದ್ರಾ ಯೋಜನೆಯಡಿ 15 ಕೋಟಿಗೂ ಹೆಚ್ಚು ಸಾಲ ಸಿಕ್ಕಿದೆ ಎಂದರು.  
 
ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಬಗ್ಗೆ ಮೊದಲು ಗೊತ್ತೇ ಇರಲಿಲ್ಲ. ಆದರೆ ಮೋದಿ ಅವರು ಬಂದ ಮೇಲೆ ಇವುಗಳು ತಿಳಿಯುವಂತಾಗಿದೆ. ದೇಶದ ಸೇವಕ ಎಂದು ಮೋದಿ ಅವರು ವಿಶ್ರಾಂತಿ ಪಡೆಯದೇ ಕೆಲಸ ಮಾಡುತ್ತಿದ್ದಾರೆ. ಇಂತಹ ಪ್ರಧಾನಿ ಸಿಕ್ಕಿರುವುದು ನಮ್ಮ ಸೌಭಾಗ್ಯ ಎಂದರು. 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ ಒತ್ತಡಕ್ಕೆ ಮಣಿದ ಬಸವರಾಜ ಹೊರಟ್ಟಿ, ಕೊನೆಗೂ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ರಾಜೀನಾಮೆ