Publish Date: Thu, 07 May 2026 (19:10 IST)
Updated Date: Thu, 07 May 2026 (19:13 IST)
ಬೆಂಗಳೂರು: ಮೇ 10 ರಂದು ಆಗಮಿಸುತ್ತಿರುವ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರಿಗೆ ಬೆಂಗಳೂರು ಜನತೆಯ ಪರವಾಗಿ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುತ್ತಿದೆ. ಮೋದಿ ಅವರ ಸಾಧನೆಗೆ ವಿಶ್ವವೇ ಕೊಂಡಾಡುತ್ತಿದೆ. 75 ವರ್ಷಗಳ ನಂತರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.
ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, ಅರ್ಧಗಂಟೆ ಕಾಲ ಎಲ್ಲರನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ನಾಗರಿಕರಿಗೆ ಮುಕ್ತ ಆಹ್ವಾನ ಇದೆ. ಅಭಿನಂದನಾ ಸಮಾರಂಭವನ್ನು ಸಂಭ್ರಮದಿಂದ ಆಚರಿಸಬೇಕು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗುವುದು. ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ಮನವಿ ಮಾಡಿದರು.
ತುಮಕೂರಿನಲ್ಲಿ ಇದೇ 9 ರಂದು ಆಯೋಜಿಸಿರುವ ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಸಹ ಸಾಕಷ್ಟು ಜನರು ಬರಲಿದ್ದಾರೆ ಎಂದು ವಿವರಿಸಿದರು.
ಎಲ್ಲಾ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವೇ ಗೆಲುವು ಸಾಧಿಸಿದೆ. ಬಿಜೆಪಿ ಇದ್ದಾಗ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆದ್ದಿರುವುದು ದೊಡ್ಡ ವಿಚಾರ ಅಲ್ಲ. ಇದಕ್ಕಿಂತ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ದೊಡ್ಡದು ಎಂದರು. ರಾಜ್ಯದಲ್ಲಿ ಒಂದಲ್ಲ ಒಂದು ಉಪ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಈ ಗೆಲುವುಗಳು ಯಾವುದಕ್ಕೂ ಮಾನದಂಡ ಅಲ್ಲ. ಒಮ್ಮೆ ಬಿಜೆಪಿ ಆಡಳಿತವಿದ್ದಾಗ 16 ಕ್ಕೆ 15 ರಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ನಂತರ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಜನರ ತೀರ್ಮಾನಕ್ಕೆ ಬದ್ಧರಾಗಬೇಕು ಎಂದರು.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು ಸಂವಿಧಾನಕ್ಕೆ ವಿರೋಧಿಯಾಗಿ ನಡೆದುಕೊಳ್ತ ಇದ್ದಾರೆ. ಅವರಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕು. ಅಷ್ಟೊಂದು ವರ್ಷಗಳಿಂದ ಅವರು ಮುಖ್ಯಮಂತ್ರಿ ಕುರ್ಚಿಗೆ ಫೆವಿಕಾಲ್ ಹಾಕಿಕೊಂಡು ಕೂತಿದ್ದರು. ಸಿಂಪತಿ ಗಿಟ್ಟಿಸಲು ಇಂತಹ ನಾಟಕ ಆಡ್ತಾ ಇದ್ದಾರೆ. ಇನ್ನು ಮೇಲೆ ಫೆವಿಕಾಲ್ಗೆ ಮಮತಾ ಅವರನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಬಹುದು ಎಂದು ವ್ಯಂಗ್ಯವಾಡಿದರು.
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರ ಹಿಂಸಾಚಾರ ಹೆಚ್ಚಿದೆ. ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ ಆಪ್ತನನ್ನು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರೇ ಕೊಲೆ ಮಾಡಿದ್ದಾರೆ. ರಾಜ್ಯದಲ್ಲಿ ಗಲಭೆ ಆಗಬೇಕು, ರಾಜಕೀಯ ಗಿಮಿಕ್ ಮಾಡಬೇಕು ಎಂದು ಮಮತಾ ತೀರ್ಮಾನಿಸಿದ್ದಾರೆ ಎಂದರು. ಆ ರಾಜ್ಯದಲ್ಲಿ ವಿಧಾನಸಭೆ ವಿಸರ್ಜನೆಯಾದರೆ ಮಮತಾ ಶಾಸಕಿಯೂ ಆಗಿರಲ್ಲ. ರಾಜೀನಾಮೆ ನೀಡಲು ನಿರಾಕರಿಸುತ್ತಿರುವ ಅವರಿಗೆ ಕಾನೂನು ತಜ್ಞರು ಛೀಮಾರಿ ಹಾಕಿದ್ದಾರೆ. ಅವರಿಗೆ ಅಧಿಕಾರದ ದುರಾಸೆ, ಮದ. ನಾನೇ ಇರಬೇಕು ಎಂಬ ವ್ಯಾಮೋಹ. ಈ ಹಿಂದೆ ಅಧಿಕಾರದಲ್ಲಿ ಇದ್ದವರು ರಾಜೀನಾಮೆ ಕೊಡಲ್ಲ ಎಂದಿದ್ದರೆ ಮಮತಾ ಕೇಳುತ್ತಿದ್ದರೇ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಂತರ ಈಗ ಕಾಂಗ್ರೆಸ್ ಕಳ್ಳಾಟ ನೋಡಿದ್ದೇವೆ. ಜೀವರಾಜ್ ಅವರು ಮತಎಣಿಕೆಯಲ್ಲಿ ತಪ್ಪಾಗಿದೆ ಎಂದು ಕೋರ್ಟ್ ಮೆಟ್ಟಿಲು ಹತ್ತಿದರು. ಅವರಿಗೆ ನ್ಯಾಯ ಸಿಕ್ಕಿದೆ. ಆಗ ಕಾಂಗ್ರೆಸ್ ಸರ್ಕಾರವೇ ಇತ್ತು. ತಹಶೀಲ್ದಾರ್, ಡಿಸಿ ಎಲ್ಲಾ ಕಾಂಗ್ರೆಸ್ಗೆ ಬೇಕಾದವರೇ ಇದ್ದರು. ಈಗ ಟ್ಯಾಂಪರಿಂಗ್ ಆಗಿದೆ ಎಂದರೆ ಹೇಗೆ. ಸೋತ ಶಾಸಕ ರಾಜೇಗೌಡರು ಕೋರ್ಟ್ ಆದೇಶಕ್ಕೆ ತಲೆಬಾಗಿ ಗೌರವದಿಂದ ನಡೆದುಕೊಳ್ಳಬೇಕು ಎಂದರು. ಜಿಬಿಎ ಚುನಾವಣೆಗೆ ಸರ್ಕಾರ ಮುಂದಾಗಿದೆ. ಚುನಾವಣೆ ನಡೆಯಬೇಕು ಎಂಬುದು ಬಿಜೆಪಿ ಬಯಕೆ ಎಂದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ