Publish Date: Mon, 13 Jan 2025 (14:59 IST)
Updated Date: Mon, 13 Jan 2025 (15:01 IST)
ಬೆಂಗಳೂರು: ಸಾಬರಿಗೆ ಎರಡೇ ಮಕ್ಕಳು ಸಾಕು ಎನ್ನುವ ಧೈರ್ಯ ಸಿದ್ದರಾಮಯ್ಯನವರು ಯಾಕೆ ಮಾಡಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರು ಒಂದು ಸಾಮೂಹಿಕ ಮದುವೆಯಲ್ಲಿ ನೀಡಿದ ಹೇಳಿಕೆ ಬಗ್ಗೆ ಆರ್ ಅಶೋಕ್ ಇಂದು ಟೀಕೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸಾಹೇಬ್ರು ನಿನ್ನೆ ಒಂದು ಹಿಂದೂಗಳ ಸಾಮೂಹಿಕ ಮದುವೆಗೆ ಹೋಗಿದ್ದಾರೆ. ಅಲ್ಲಿ ಹೋಗಿ ನೀವು ಎರಡೇ ಮಕ್ಕಳು ಮಾಡಿ. ಎರಡು ಮಕ್ಕಳ ಮೇಲೆ ಮಾಡಕ್ಕೆ ಹೋಗಬೇಡಿ, ನಿಮ್ಮ ಕೈಯಲ್ಲಿ ಸಾಕಕ್ಕಾಗಲ್ಲ ಎಂದು ಬುದ್ಧಿ ಹೇಳಿದ್ದಾರೆ.
ನಾನು ಸಿದ್ದರಾಮಯ್ಯನವರತ್ರ ಕೇಳ್ತೀನಿ, ನೀವು ಇದೇ ಮಾತನ್ನು ಸಾಬರಿಗೆ ಹೋಗಿ ಹೇಳಬೇಕಲ್ಲಾ? ನಿಮಗೆ ಒಂದೇ ಮಕ್ಕಳು ಸಾಕು. ನೀವು ಬಡತನದಲ್ಲಿದ್ದೀರಿ, ಓದಿಸಕ್ಕೆ ಆಗಲ್ಲ, ಮದುವೆ ಮಾಡಕ್ಕಾಗಲ್ಲ ಎಂದು ಯಾಕೆ ಹೇಳಲ್ಲ? ಅಂದರೆ ಸಿದ್ದರಾಮಯ್ಯನವರು ಹಿಂದೂಗಳ ಸಂಖ್ಯೆ ಕಡಿಮೆಯಾಗಬೇಕು, ಮುಸ್ಲಿಮರ ಸಂಖ್ಯೆ ಹೆಚ್ಚಾಗಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ.
ಯಾವ ನೈತಿಕತೆ ಇಟ್ಕೊಂಡು ಹಿಂದೂಗಳಿಗೆ ಈ ರೀತಿ ಹಿತವಚನ ಹೇಳ್ತೀರಿ? ಒಂದು ಧರ್ಮಕ್ಕೆ ಸುಣ್ಣ, ಒಂದು ಧರ್ಮಕ್ಕೆ ಬೆಣ್ಣೆ ಹಾಕೋದು. ಈ ಓಲೈಕೆ ರಾಜಕಾರಣ ಮಾಡಿದ್ದಕ್ಕೇ ಈವತ್ತು ಕರ್ನಾಟಕದ ಕಾನೂನು ಸುವ್ಯವಸ್ಥೆ ಹಾಳಾಗಿರೋದು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಚಾಮರಾಜಪೇಟೆಯಲ್ಲಿ ದನದ ಮೇಲೆ ನಡೆಸಿದ ಕ್ರೌರ್ಯದ ಬಗ್ಗೆ ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವಾಗ ಈ ರೀತಿ ಪ್ರಶ್ನೆ ಮಾಡಿದ್ದಾರೆ.