Publish Date: Fri, 23 Jan 2026 (15:29 IST)
Updated Date: Fri, 23 Jan 2026 (15:32 IST)
ಬೆಂಗಳೂರು: ನಿನ್ನೆ ರಾಜ್ಯಪಾಲರನ್ನು ತಡೆಯುವ ವೇಳೆ ಉಂಟಾದ ಘರ್ಷಣೆಯಲ್ಲಿ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಬಟ್ಟೆ ತಾವೇ ಹರಿದುಕೊಂಡು ಬಿಜೆಪಿ ಮೇಲೆ ಗೂಬೆ ಕೂರಿಸಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ಇಂದೂ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಗದ್ದಲ ಮುಂದುವರಿದಿತ್ತು. ಬಿಕೆ ಹರಿಪ್ರಸಾದ್ ಗೂಂಡಾಗಿರಿ ವರ್ತನೆಗೆ ಅವರನ್ನು ಸದನದಿಂದ ಅಮಾನತುಮಾಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಇದರಿಂದಾಗಿ ಕಲಾಪ ಕೆಲವು ಕಾಲ ಮುಂದೂಡಬೇಕಾಯಿತು.
ಇನ್ನು ಬಿಕೆ ಹರಿಪ್ರಸಾದ್ ನಿನ್ನೆ ಬಿಜೆಪಿಯವರೇ ನನ್ನ ಬಟ್ಟೆ ಹರಿದಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ ಅಶೋಕ್ ಸದನಕ್ಕೆ ಬಂದ ರಾಜ್ಯಪಾಲರನ್ನು ಅಗೌರವದಿಂದ ಕಾಂಗ್ರೆಸ್ ಸರ್ಕಾರ ಬೀಳ್ಕೊಟ್ಟಿದೆ. ರಾಜ್ಯಪಾಲರ ವಿರುದ್ಧ ನಿನ್ನೆ ನಡೆದ ಘಟನೆಯಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಬಟ್ಟೆಯನ್ನು ಬಿಜೆಪಿಗರು ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರಿಗೆ ಅಡ್ಡ ನಿಂತವರು ಅವರೇ, ಅವರ ಹಿಂದೆ ಸುತ್ತ ಮುತ್ತ ಇದ್ದವರೂ ಕಾಂಗ್ರೆಸ್ನವರೇ. ಮಾರ್ಷಲ್ಗಳೊಂದಿಗೆ ಜಗ್ಗಾಡಿದವರು ಅವರೇ, ಆರೋಪ ಮಾತ್ರ ಬಿಜೆಪಿ ಮೇಲೆ. ವಿಡಿಯೋ ಪರಿಶೀಲಿಸಿ ಸಭಾಧ್ಯಕ್ಷರು ಕ್ರಮಕೈಗೊಳ್ಳಬೇಕು ಎಂದಿದ್ದಾರೆ.