Publish Date: Wed, 11 Sep 2019 (10:10 IST)
Updated Date: Wed, 11 Sep 2019 (10:14 IST)
ಬೆಂಗಳೂರು: ಈ ಬಾರಿ ಯುವ ದಸರಾ ಉದ್ಘಾಟನೆ ಮಾಡಲು ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ರಾಜ್ಯ ಸರ್ಕಾರದ ಪರವಾಗಿ ಸಿಎಂ ಯಡಿಯೂರಪ್ಪ ಪತ್ರ ಮುಖೇನ ಆಹ್ವಾನ ಕಳುಹಿಸಿದ್ದಾರೆ ಎನ್ನಲಾಗಿದೆ.
ವಿಶ್ವ ವಿಖ್ಯಾತ ದಸರಾ ಆಚರಣೆ ವೇಳೆ ನಡೆಯುವ ಯುವ ದಸರಾ ಉತ್ಸವಕ್ಕೆ ಅಕ್ಟೋಬರ್ 1 ರಂದು ಚಾಲನೆ ನೀಡಲಾಗುವುದು. ಈ ಬಾರಿ ಯುವ ದಸರಾ ಉತ್ಸವಕ್ಕೆ ಹಲವು ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಪಿವಿ ಸಿಂಧು ಕೈಯಿಂದ ಚಾಲನೆ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ಪಿವಿ ಸಿಂಧುಗೆ ಪತ್ರ ಮುಖೇನ ಆಹ್ವಾನ ನೀಡಿರುವ ಸಿಎಂ ಯಡಿಯೂರಪ್ಪ ‘ನವರಾತ್ರಿ ಸಂದರ್ಭ ನಡೆಯುವ ದಸರಾ ಉತ್ಸವ ವಿಶ್ವವಿಖ್ಯಾತವಾಗಿದೆ. ಲಕ್ಷಾಂತರ ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ಸಾಧನೆ ಹಲವು ಯುವ ಜನರಿಗೆ ಸ್ಪೂರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 1 ರಂದು ಯುವ ದಸರಾ ಉದ್ಘಾಟಿಸಲು ಆಗಮಿಸಬೇಕು’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.