Publish Date: Mon, 22 Nov 2021 (12:54 IST)
Updated Date: Mon, 22 Nov 2021 (12:57 IST)
ಕಾರವಾರ : ಅಬಕಾರಿ ಇಲಾಖೆಯಲ್ಲಿ ಪಿಎಸ್ಐ ಹುದ್ದೆ ಕೊಡಿಸುತ್ತೇನೆಂದು ನಂಬಿಸಿ 3 ಲಕ್ಷ ರೂಪಾಯಿ ವಂಚಿಸಿರುವ ಕುರಿತು ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರಸಿ ತಾಲೂಕಿನ ಕಾಳಂಗಿ ಗ್ರಾಮದ, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರುದ್ರೇಶ ಕಲ್ಮಟ್ಲೇರ ವಂಚನೆಗೊಳಗಾದವರಾಗಿದ್ದು, ಕುಂದಾಪುರ ಮೂಲದ ರಾಘವೇಂದ್ರ ಪೂಜಾರಿ ಎನ್ನುವವರ ಮೇಲೆ ದೂರು ದಾಖಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಪಿಎಸ್ಐ ಹುದ್ದೆ ಕೊಡಿಸುತ್ತೇನೆ. ಅದಕ್ಕೆ ಒಟ್ಟು 10 ಲಕ್ಷ ಹಣವನ್ನು ಕೊಡಬೇಕಾಗುತ್ತದೆ. ಮೊದಲು 3 ಲಕ್ಷ ಹಣವನ್ನು ಕೊಡಿ, ನಂತರ ನೇಮಕಾತಿ ಪತ್ರ ಬಂದ ಕೂಡಲೇ ಉಳಿದ ಹಣವನ್ನು ಕೊಡಿ ಎಂದು 2018ರಲ್ಲಿ ರಾಘವೇಂದ್ರ ರುದ್ರೇಶ ಅವರಿಗೆ ನಂಬಿಸಿ, ಅವರಿಂದ 2018ರ ನ.14ರಂದು 2 ಲಕ್ಷ ರೂಪಾಯಿ, 15ರಂದು 20 ಸಾವಿರ ರೂಪಾಯಿ, 2019ರ ಜ.23ರಂದು 50 ಸಾವಿರ ರೂಪಾಯಿ ಹಾಗೂ ಮಾ.26ರಂದು 30 ಸಾವಿರ ರೂಪಾಯಿ, ಹೀಗೆ ಒಟ್ಟೂ 3 ಲಕ್ಷ ರೂಪಾಯಿ ಪಡೆಕೊಂಡಿದ್ದಾನೆ.
ಆದರೆ ಈವರೆಗೆ ನೌಕರಿ ಕೊಡಿಸದೇ ಮತ್ತು ರುದ್ರೇಶ ನೀಡಿದ್ದ 3 ಲಕ್ಷ ರೂಪಾಯಿ ಹಣವನ್ನು ಸಹ ಮರಳಿ ನೀಡದೇ ವಂಚನೆ ಮಾಡಿದ್ದಾರೆ ಎಂದು ವಂಚನೆಗೊಳಗಾದ ರುದ್ರೇಶ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.