Publish Date: Sun, 04 Nov 2018 (18:18 IST)
Updated Date: Sun, 04 Nov 2018 (18:20 IST)
ಭಾರತದ ಸರ್ವೋಚ್ಛ ನ್ಯಾಯಾಲಯವು ಸಿವಿಲ್ ಪಿಟಿಷನ್ ಸಂ.728/2015ರಲ್ಲಿ ಕಳೆದ ಅಕ್ಟೋಬರ್ 23, 30 ಹಾಗೂ 31ರಂದು ನೀಡಿದ ತೀರ್ಪಿನನ್ವಯ ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ಪಟಾಕಿ ಸಿಡಿತದಿಂದ ಉಂಟಾಗುವ ಘನತ್ಯಾಜ್ಯ ವಸ್ತುಗಳ ಮಾಲಿನ್ಯ ತಡೆಯಲು ಸರಣಿ ಸ್ಪೋಟಕ ಪಟಾಕಿಗಳು ತಯ್ಯಾರಿಸುವುದು, ಮಾರಾಟ ಮತ್ತು ಬಳಸುವುದನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂತಹ ಪಟಾಕಿಗಳನ್ನು ನಿಷೇಧಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಈ ವಿಷಯ ತಿಳಿಸಿದ್ದು, ದೀಪವಾಳಿ ಹಬ್ಬದ ಸಂಬಂಧ 2018ರ ನವೆಂಬರ್-5 ನವೆಂಬರ್-6, ನವೆಂಬರ್-7(ದೀಪಾವಳಿ ಅಮಾವಾಸ್ಯೆ) ಹಾಗೂ ನವೆಂಬರ್-8(ಬಲಿಪಾಡ್ಯಮಿ) ದಿನಗಳಂದು ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಬಹುದು. ನಿಗಧಿತ ಸಮಯದಲ್ಲಿ ಮಾತ್ರ ಪಟಾಕಿ ಸಿಡಿತ ಪ್ರಕ್ರಿಯೆ ನಡೆಯುವಂತೆ ಹಾಗೂ ನಿಷೇಧಿತ ಪಟಾಕಿ ಮಾರಾಟವನ್ನು ತಡೆಗಟ್ಟುವುದು ಪೋಲಿಸ್ ಇಲಾಖೆಯ ಜವಾಬ್ದಾರಿಯಾಗಿದ್ದು, ತಪ್ಪಿದಲ್ಲಿ ಸಂಬಂಧಿಸಿದ ಠಾಣಾಧಿಕಾರಿಗಳನ್ನು ನ್ಯಾಯಾಲಯದ ಉಲ್ಲಂಘನೆಗಾಗಿ ತಪ್ಪಿಸ್ಥರೆಂದು ನಿರ್ಧರಿಸಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಅನಧಿಕೃತ ಮಾರಾಟ ಮಾಡಿದಲ್ಲಿ ಕಠಿಣ ಕ್ರಮ: ನಿಷೇಧಿತ ಪಟಾಕಿ ಹೊರತುಪಡಿಸಿ ಇನ್ನುಳಿದ ಸ್ಪೋಟಕ ಪಟಾಕಿಗಳನ್ನು ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಮಾರಾಟ ಮಾಡಬೇಕು. ಪರವಾನಿಗೆ ಹೊಂದದ ಮಾರಾಟಗಾರರು ಪಟಾಕಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.