Publish Date: Sat, 25 Mar 2023 (08:48 IST)
Updated Date: Sat, 25 Mar 2023 (09:47 IST)
ಬೆಂಗಳೂರು : ಚುನಾವಣೆ ಹೊತ್ತಲ್ಲಿ ಬಿಜೆಪಿ ರಾಜ್ಯದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ.
ದಾವಣಗೆರೆಯಲ್ಲಿ ಇಂದು (ಮಾ.25) ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭ ಹಾಗೂ ಬೆಂಗಳೂರಿನಲ್ಲಿ ಕೆ.ಆರ್.ಪುರಂ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆಗೆ ಮೋದಿ ಬರುತ್ತಿದ್ದಾರೆ.
ಬಹುನೀರಿಕ್ಷೀತ ಕೆ.ಆರ್.ಪುರ ಮತ್ತು ವೈಟ್ ಫೀಲ್ಡ್ ನಡುವಿನ ಮೆಟ್ರೋ ಉದ್ಘಾಟನೆ ಕೂಡ ಇಂದು ಪ್ರಧಾನಿ ಮೋದಿ ಅವರಿಂದ ಆಗಲಿದೆ. 4500 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿರೋ ಹೊಸ ಮೆಟ್ರೋ ಮಾರ್ಗ ಇಂದು ಲೋಕಾರ್ಪಣೆಗೊಳ್ಳಲಿದೆ. ಮಧ್ಯಾಹ್ನ 13:55ಕ್ಕೆ ಪ್ರಧಾನಿಗಳು ಎಚ್ಎಎಲ್ನಿಂದ ರಸ್ತೆ ಮೂಲಕ ನೇರವಾಗಿ ವೈಟ್ ಫೀಲ್ಡ್ನ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
1 ಗಂಟೆಯಿಂದ 1:35 ರ ಒಳಗೆ 13.71 ಕಿ.ಮೀ ಉದ್ದ ಮೆಟ್ರೋ ಮಾರ್ಗವನ್ನ ಉದ್ಘಾಟಿಸಲಿರೋ ನಮೋ, ಬಳಿಕ ಮೆಟ್ರೋ ಸಂಚಾರ ಕೂಡ ಮಾಡಲಿದ್ದಾರೆ. ವೈಟ್ ಫೀಲ್ಡ್ನ ಕಾಡುಗೋಡಿ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಚೆನ್ನಸಂದ್ರ ಮೆಟ್ರೋ ನಿಲ್ದಾಣದವರೆಗೆ ಹೊಸ ಮಾರ್ಗದಲ್ಲಿ ಸಂಚಾರ ಮಾಡಿ ಅಲ್ಲಿಂದ ನೇರವಾಗಿ ಮತ್ತೆ ಎಚ್ಎಎಲ್ಗೆ ತೆರಳಿ ಅಲ್ಲಿಂದ ದಾವಣಗೆರೆಗೆ ಪ್ರಯಾಣ ಬೆಳೆಸಲಿದ್ದಾರೆ.