Publish Date: Thu, 06 Jul 2017 (21:10 IST)
Updated Date: Thu, 06 Jul 2017 (21:17 IST)
ಚಿಕ್ಕಪ್ಪ ಕುಮಾರಸ್ವಾಮಿ ವಿರುದ್ಧವೇ ತೊಡೆತಟ್ಟಿದ ಪ್ರಜ್ವಲ್ ರೇವಣ್ಣ, ಪಕ್ಷದಲ್ಲಿ ಸೂಟ್ಕೇಸ್ ಸಂಸ್ಕ್ರತಿಯಿದೆ ಎಂದು ವಾಗ್ದಾಳಿ ನಡೆಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ನಮ್ಮ ಪಕ್ಷದಲ್ಲಿ ಒಂದು ರೋಗವಿದೆ. ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದವರಿಗೆ ಹಿಂದಿನ ಸೀಟ್ನಲ್ಲಿ ಸ್ಥಳ ದೊರೆಯುತ್ತದೆ. ಸೂಟ್ಕೇಸ್ನಲ್ಲಿ ಹಣ ತಂದವರಿಗೆ ಮಾತ್ರ ಮುಂದಿನ ಸೀಟ್ ದೊರೆಯುತ್ತದೆ ಎಂದು ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ.
ದೇವೇಗೌಡರ ಮೊಮ್ಮಗ, ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ, ಹುಣಸೂರಿನ ಗೌರಮ್ಮ ಪುಟ್ಟಸ್ವಾಮಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಬಂಡಾಯವನ್ನು ಬೀದಿಗೆ ಹಾಕಿದ್ದಾರೆ.
ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಕ್ಷದ ವಿರುದ್ದವೇ ಬಂಡಾಯದ ರಣಕಹಳೆ ಮೊಳಗಿಸಿದ ಅವರು, ದೂರದ ಬೆಟ್ಟ ನುಣ್ಣಗೆ ಕಾಣುತ್ತದೆ. ಆದರೆ, ಹತ್ತಿರ ಹೋಗಿ ನೋಡಿದಲ್ಲಿ ಗಿಡ, ಮುಳ್ಳುಗಳು ಕಾಣುತ್ತವೆ ಎಂದು ವ್ಯಂಗ್ಯವಾಡಿದರು.
ಹುಣಸೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಜ್ವಲ್, ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದ ನಂತರ ತಮಗೆ ಟಿಕೆಟ್ ದೊರೆಯುತ್ತದೆಯೋ ಇಲ್ಲವೋ ಎನ್ನುವ ಅನುಮಾನ ಅವರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.