Publish Date: Fri, 01 Aug 2025 (14:39 IST)
Updated Date: Fri, 01 Aug 2025 (14:42 IST)
ಬೆಂಗಳೂರು: ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದೆ.
ಜನಪ್ರತಿನಿಧಿಗಳ ಕೋರ್ಟ್ ಇಂದು ಪ್ರಜ್ವಲ್ ಪ್ರಕರಣದ ತೀರ್ಪು ಪ್ರಕಟಿಸಿದೆ. ಜುಲೈ 28 ರಂದು ವಿಚಾರಣೆ ಪೂರ್ತಿಯಾಗಿತ್ತು. ಜುಲೈ 30 ರಂದು ತೀರ್ಪು ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ತೀರ್ಪು ಇಂದಿಗೆ ಮುಂದೂಡಿಕೆಯಾಗಿತ್ತು.
ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಪರಿಗಣಿಸಿ ಜನಪ್ರತಿನಿಧಿಗಳ ಕೋರ್ಟ್ ನ್ಯಾಯಾಧೀಶರಾದ ನ್ಯಾ. ಸಂತೋಷ್ ಗಜನಾನನ ಭಟ್ ಪ್ರಜ್ವಲ್ ಈ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ. ಪ್ರಜ್ವಲ್ ರನ್ನು ಇಂದು ತೀರ್ಪಿನ ನಿಮಿತ್ತ ನೇರವಾಗಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ತೀರ್ಪು ಪ್ರಕಟವಾಗುತ್ತಿದ್ದಂತೇ ಆಘಾತಕ್ಕೊಳಗಾದ ಪ್ರಜ್ವಲ್ ಕಣ್ಣೀರು ಸುರಿಸಿದ್ದಾರೆ. ಬಳಿಕ ಕಣ್ಣೀರು ಒರೆಸುತ್ತಲೇ ಕೋರ್ಟ್ ನಿಂದ ಪೊಲೀಸರ ಜೊತೆ ಮರಳಿ ಜೈಲು ಸೇರಿದ್ದಾರೆ. ಗಮನಿಸಬೇಕಾದ ಅಂಶವೆಂದರೆ ಇದು ಒಂದೇ ಪ್ರಕರಣದ ತೀರ್ಪು ಈಗ ಬಂದಿದೆ. ಇನ್ನೂ ಮೂರು ಪ್ರಕರಣಗಳು ಪ್ರಜ್ವಲ್ ಮೇಲಿದೆ.