Publish Date: Tue, 31 Jul 2018 (16:39 IST)
Updated Date: Tue, 31 Jul 2018 (16:43 IST)
ಶಾಸಕರೊಬ್ಬರು ತಮಗೆ ಆಹ್ವಾನವಿಲ್ಲದ ಕಾರ್ಯಕ್ರಮಕ್ಕೆ ಆಗಮಿಸಿದ ಸಚಿವರನ್ನು ಕಾರ್ಯಕ್ರಮಕ್ಕೆ ಹೋಗದಂತೆ ತಡೆದು ಸಚಿವರನ್ನು ವಾಪಸ್ ಹೋಗುವಂತೆ ಮಾಡಿದ ಘಟನೆ ನಡೆದಿದೆ.
ಬೆಂಗಳೂರು ಹೊರವಲಯದ ಆನೇಕಲ್'ನಲ್ಲಿ ಈ ಘಟನೆ ನಡೆದಿದೆ. ಆನೇಕಲ್ ಪಟ್ಟಣದಲ್ಲಿ ಪರಿಸರ ಮತ್ತು ವನ್ಯಜೀವಿ ಹಿತರಕ್ಷಣಾ ಸಮಿತಿ ಪರಿಸರ ದಿನಾಚಾರಣೆ ಹಾಗೂ ದಿವಂಗತ ಮಣಿಕಂದನ್ ನೆನೆಪಿನ ಕಾರ್ಯಕ್ರಮವನ್ನು ಶ್ರೀರಾಮ ಕುಟೀರದಲ್ಲಿ ಆಯೋಜಿಸಿತ್ತು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಅರಣ್ಯ ಸಚಿವ ಆರ್. ಶಂಕರ್ ಅಗಮಿಸಬೇಕಿತ್ತು, ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಅರಣ್ಯ ಸಚಿವರು ಆನೇಕಲ್ ಪಟ್ಟಣಕ್ಕೆ ಆಗಮಿಸಿ ಪ್ರವಾಸಿ ಮಂದಿರದಲ್ಲಿದ್ದರು. ಇನ್ನೇನು ಕಾರ್ಯಕ್ರಮದ ವೇದಿಕೆಗೆ ತೆರಳಬೇಕೆನ್ನುವಷ್ಟರಲ್ಲಿ ಸ್ಥಳೀಯ ಶಾಸಕ ಬಿ.ಶಿವಣ್ಣ ಸಚಿವರಿಗೆ ಕರೆ ಮಾಡಿ ಸ್ಥಳೀಯ ಶಾಸಕನಾದ ತನಗೆ ಆಹ್ವಾನವಿಲ್ಲದ ಕಾರ್ಯಕ್ರಮಕ್ಕೆ ತೆರಳದಂತೆ ಸಚಿವರಿಗೆ ಹೇಳಿದರು ಎನ್ನಲಾಗಿದೆ.
ಇನ್ನು ಆಡಳಿತ ಪಕ್ಷದ ಶಾಸಕರ ಮಾತಿಗೆ ಬೆಲೆ ನೀಡಿದ ಅರಣ್ಯಸಚಿವ ಎನ್. ಶಂಕರ್ ಅವರು ಏಕಾಏಕಿ ಕಾರ್ಯಕ್ರಮಕ್ಕೆ ಹೋಗುವುದನ್ನು ರದ್ದುಗೊಳಿಸಿ ಹೊರಟು ನಿಂತರು. ಇನ್ನು ಮಾಧ್ಯಮದವರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸರಿಯಾಗಿ ಉತ್ತರವನ್ನು ನೀಡದೆ ತುರಾತುರಿಯಲ್ಲಿ ಹೊರಟರು.