ಕೂಡ್ಲಿಗಿ ಡಿಎಸ್ಪಿ ಅನಪಮ ಶೆಣೈ ರಾಜೀನಾಮೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ರಾಜೀನಾಮೆ ನೀಡಿರುವುದು ವೈಯಕ್ತಿಕ ಕಾರಣಗಳಿಂದಲ್ಲ, ಲಿಕ್ಕರ್ ಲಾಬಿಯ ಪ್ರಭಾವದಿಂದ ಎನ್ನುವ ಪ್ರಮುಖ ಮಾಹಿತಿ ಬಹಿರಂಗವಾಗಿದೆ.
ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿರುವ ಪಿಎಸ್ಐ, ಸಿಪಿಐಗಳು ನೇರ ಭಾಗಿಯಾಗಿದ್ದಾರೆ, ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಕೂಡಾ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಡಿಎಸ್ಪಿ ಅನಪಮ ಶೆಣೈ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಜೂನ್ 4 ರಂದು ಗೃಹ ಕಾರ್ಯದರ್ಶಿಯವರಿಗೆ ಎರಡು ರಾಜೀನಾಮೆ ಪತ್ರ ರವಾನಿಸಿದ ಶೆಣೈ, ನೇರವಾಗಿ ಲಿಕ್ಕರ್ ಲಾಬಿ ಬಗ್ಗೆ ಪ್ರಸ್ತಾಪಿಸಿ, ನನ್ನ ಆರೋಪಗಳಲ್ಲಿ ತಪ್ಪಿದ್ದಲ್ಲಿ ಇಲಾಖೆಯ ಶಿಸ್ತಿನ ಕ್ರಮ ಎದುರಿಸಲು ಸಿದ್ದ ಎಂದಿದ್ದರು.
ಕೂಡ್ಲಿಗಿ ವಿಭಾಗದಲ್ಲಿ ಅಕ್ರಮ ಮದ್ಯ ನಿರ್ಮೂಲನೆಗೆ ನನ್ನಿಂದಲೇ ಕೆಲ ಕಟ್ಟು ನಿಟ್ಟಿನ ಕೆಲಸಗಳಾಗಿವೆ. ಲಿಕ್ಕರ್ ಲಾಬಿ ನಿಯಂತ್ರಣಕ್ಕೆ ತುಂಬಾ ಪ್ರಯತ್ನ ಪಟ್ಟಿದ್ದೇನೆ. ಆದರೆ, ಪೊಲೀಸ್ ಅಧಿಕಾರಿಗಳು, ರಾಜಕೀಯ ಲಾಬಿಗಳಿಂದ ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾದ್ಯವಾಗದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧವೇ ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡಿದ್ದಾರೆ, ಪ್ರತಿಭಟನೆಯನ್ನು ತಡೆಯಲು ನಾನು ನಿಷ್ಕ್ರೀಯಳಾಗಿದ್ದೆ. ಇದಕ್ಕಾಗಿ ಇಲಾಖೆಯ ಶಿಸ್ತು ಕ್ರಮ ಎದುರಿಸಲು ಸಿದ್ದ ಎಂದು ಡಿವೈಎಸ್ಪಿ ಅನುಪಮ ಶೆಣೈ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ