Publish Date: Fri, 30 Jun 2023 (22:02 IST)
Updated Date: Fri, 30 Jun 2023 (22:28 IST)
ಬೆಂಗಳೂರು : ಸೋಲು ಯಾವಾಗಲೂ ಹಾಗೆ ಅನಾಥ. ಗೆಲುವಿಗಷ್ಟೇ ಮಾಲೀಕ ಎಂಬದು ಎಲ್ಲರ ಆಟ. ಇದು ಬಿಜೆಪಿ ಮನೆಯೊಳಗಿನ ನೆಮ್ಮದಿಯನ್ನು ಕೆಡಿಸಿದೆ. ಬಹಿರಂಗ ಗುದ್ದಾಟದಿಂದ ಬಿಜೆಪಿ ಶಿಸ್ತು ಕುಸಿತಕ್ಕೆ ಬ್ರೇಕ್ ಹಾಕುವ ಪ್ರಯತ್ನ ನಡೆದಿದೆ.
ರೇಣುಕಾಚಾರ್ಯ ಮಾತ್ರ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿಯ ಡ್ಯಾಮೇಜ್ ಕಂಟ್ರೋಲ್ ಸಭೆಯಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ.
3 ತಿಂಗಳ ಹಿಂದೆ ತಿಳಿ ನೀರಿನ ಕೊಳದಲ್ಲಿ ಕಮಲ ನಳನಳಿಸುತ್ತಿತ್ತು. ಆದರೆ ಮೇ 13ರ ಬಳಿಕ ಕದಡಿದ ಕೊಳದಲ್ಲಿ ಕಮಲ ವಿಲವಿಲ ಅಂತಿದೆ. ಸೋಲಿನ ಕಹಿ ಬಿಜೆಪಿ ನಾಯಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಹೊಂದಾಣಿಕೆ ರಾಜಕಾರಣದ ಕಿಡಿ ಹೊತ್ತಿ ಬೇಯುತ್ತಿದೆ. ಡಜನ್ಗೂ ಹೆಚ್ಚು ನಾಯಕರು ಬಹಿರಂಗವಾಗಿ ವಾಕ್ಸಮರಕ್ಕೆ ಇಳಿದಿದ್ದಾರೆ.
ಇದರ ಬೆನ್ನಲ್ಲೇ ವರದಿ ಪಡೆದ ಬಿಜೆಪಿ ಹೈಕಮಾಂಡ್ ಶಿಸ್ತಿನ ಗೆರೆ ಅಳಿಸಿ ಹೋಗದಂತೆ ತಡೆಯಬೇಕೆಂಬ ಕಟ್ಟಪ್ಪಣೆ ಹೊರಡಿಸಿದೆ. ಹೀಗಾಗಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಕಟೀಲ್, ಯಡಿಯೂರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಒಳಗೊಂಡ ಐವರು ನಾಯಕರ ನೇತೃತ್ವದಲ್ಲಿ ವಿವರಣೆ ಪಡೆದು ಎಚ್ಚರಿಕೆ ಕೊಡುವ ಸಭೆ ನಡೆಸಿದರು.