Publish Date: Thu, 16 Mar 2023 (13:06 IST)
Updated Date: Thu, 16 Mar 2023 (18:07 IST)
ಧಾರವಾಡ : 2024ರ ಲೋಕಸಭೆ ಚುನಾವಣೆ ಹೊತ್ತಿಗೆ ಕಾಂಗ್ರೆಸ್ ಸಮಾಪ್ತಿ ಆಗುತ್ತದೆ, ಆ ಸಮಯದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ದೀಪ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ 5 ವರ್ಷ ಏನು ಮಾಡಿದ್ದಾರೆ ಹೇಳಲಿ, ಇದು ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಜವಾಹರಲಾಲ್ ಕಾಂಗ್ರೆಸ್ ಅಲ್ಲ, ತಾಯಿ, ಮಕ್ಕಳ ಕಾಂಗ್ರೆಸ್ ಆಗಿದೆ. ತಾಯಿ, ಮಕ್ಕಳಿಗೆ ನಿಷ್ಠೆ ತೋರಿಸಿದವರಿಗೆ ಮಾತ್ರ ಪದಾಧಿಕಾರಿ ಮಾಡುತ್ತಾರೆ. ಸದ್ಯ ಕಾಂಗ್ರೆಸ್ ಅಳಿವಿನಂಚಿನಲ್ಲಿದೆ ಎಂದು ಟೀಕಿಸಿದರು.
ಕೆಂಪಣ್ಣನಿಗೆ ಕಾಂಗ್ರೆಸ್ನವರೇ ಕುಳಿತು ಅರ್ಜಿ ಬರೆಸಿದ್ದಾರೆ. ಕಾಂಗ್ರೆಸ್ನವರು ಭ್ರಷ್ಟಾಚಾರದಲ್ಲಿ ಜೈಲಿಗೆ ಹೋಗಿ ಬಂದವರು ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ. ಅಂಥವರು ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುವುದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆ ಆಧರಿಸಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದೇವೆ. ಮೋದಿಯವರು ದೇಶದ ಅಭಿವೃದ್ಧಿಯ ಅದ್ಭುತ ಕನಸುಗಾರರು. ಜನ್ಧನ್ ಖಾತೆ ಬಡವರಿಗೆ ಬ್ಯಾಂಕ್ ಅಕೌಂಟ್ ಆರಂಭಿಸುವಂತೆ ಮಾಡಿದ ಯೋಜನೆ 48 ಕೋಟಿ ಜನರಿಗೆ ಇದು ತಲುಪಿದೆ. ಕಾಂಗ್ರೆಸ್ ಪಕ್ಷ ಬಡವರಿಗೆ ಬ್ಯಾಂಕ್ ತೋರಿಸುವ ಕೆಲಸ ಮಾಡಿರಲಿಲ್ಲ, ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಪಡೆದರೆ ಅಭಿವೃದ್ಧಿ ಹೆಚ್ಚಾಗುತ್ತದೆ ಎಂದು ಹೇಳಿದರು.