Publish Date: Tue, 12 Mar 2024 (15:29 IST)
Updated Date: Tue, 12 Mar 2024 (15:32 IST)
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಕರ್ನಾಟಕದ 22 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದೆ ಎನ್ನಲಾಗುತ್ತಿದೆ. ಆದರೆ ಈ ಲಿಸ್ಟ್ ನಲ್ಲಿ ಕೆಲವು ಘಟಾನುಘಟಿಗಳಿಗೇ ಕೊಕ್ ಕೊಡಲಾಗಿದೆ. ಅವರು ಯಾರೆಂದು ನೋಡೋಣ.
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400 ಪ್ಲಸ್ ಸ್ಥಾನ ಗೆಲ್ಲಬೇಕೆಂದು ಶತ ಪ್ರಯತ್ನ ಮಾಡುತ್ತಿರುವ ಬಿಜೆಪಿ ಕೆಲವು ಹಳಬರಿಗೆ ಕೊಕ್ ನೀಡಿ, ಹೊಸ ಮುಖ, ಜನಪ್ರಿಯ ಮುಖಗಳಿಗೆ ಮಣೆ ಹಾಕಲು ಹೊರಟಿದೆ. ಅದರಂತೆ ಮೈಸೂರಿನಿಂದ ರಾಜವಂಶಸ್ಥ ಯದುವೀರ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಅದರ್ಥ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ನೀಡಲ್ಲ ಎಂದಾಗಿದೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಗೂ ಈ ಬಾರಿ ಟಿಕೆಟ್ ಸಿಗುವುದು ಡೌಟ್. ಕಳೆದ ಮೂರು ಬಾರಿ ಸತತವಾಗಿ ದ.ಕ. ಜಿಲ್ಲೆಯಿಂದ ಗೆದ್ದು ಬಂದ ನಳಿನ್ ಗೆ ಈಗ ಸ್ವಕ್ಷೇತ್ರದಲ್ಲೇ ಕಾರ್ಯಕರ್ಯತರ ಬೆಂಬಲವಿಲ್ಲ. ಹೀಗಾಗಿ ಅವರ ಬದಲಾವಣೆಯಾಗುವುದು ಬಹುತೇಕ ಖಚಿತ.
ಬೆಂಗಳೂರು ಉತ್ತರ ಕ್ಷೇತ್ರದಿಂದ ಕಳೆದ ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಡಿವಿ ಸದಾನಂದ ಗೌಡಗೂ ಮತ್ತೆ ಅವಕಾಶ ಕೊಡಲು ಹೈಕಮಾಂಡ್ ಗೆ ಮನಸ್ಸಿಲ್ಲ. ಅದಕ್ಕೆ ಅವರ ಈ ಬಾರಿಯ ಕಾರ್ಯವೈಖರಿ ಮತ್ತು ಇತ್ತೀಚೆಗೆ ಪಕ್ಷದ ವಿರುದ್ಧವೇ ಪರೋಕ್ಷ ಅಸಮಾಧಾನ ಹೊರಹಾಕಿದ್ದೂ ಕಾರಣ ಎನ್ನಬಹುದು.
ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆಗೂ ಈ ಬಾರಿ ಟಿಕೆಟ್ ನೀಡಬಾರದು ಎಂದು ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಕೆಲಸ ಮಾಡದೇ ಈಗ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಪಕ್ಷಕ್ಕೇ ಮುಜುಗರ ತರಿಸುತ್ತಿರುವ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಕೇಳಿಬಂದಿದೆ.
ಇನ್ನು, ಉಡುಪಿ-ಚಿಕ್ಕಮಗಳೂರು ಹಾಲಿ ಸಂಸದೆ ಶೋಭಾ ಕರಂದ್ಲಾಜೆಗೂ ಟಿಕೆಟ್ ನೀಡಲು ಬಿಎಲ್ ಸಂತೋಷ್ ಬಣದ ವಿರೋಧವಿದೆ. ಅಲ್ಲಿನ ಕಾರ್ಯಕರ್ತರೇ ಶೋಭಾ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಿದ್ದರು. ಆದರೆ ಶೋಭಾಗೆ ಬಿಎಸ್ ಯಡಿಯೂರಪ್ಪ ಅಭಯವಿದೆ ಎನ್ನುವುದೇ ಪ್ಲಸ್ ಪಾಯಿಂಟ್.