Publish Date: Wed, 29 May 2024 (09:55 IST)
Updated Date: Wed, 29 May 2024 (10:07 IST)
ಬೆಂಗಳೂರು: ಕೋಟ್ಯಾಂತರ ರೂಪಾಯಿ ಅವ್ಯವಹಾರ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನಾಗೇಂದ್ರ ರಾಜೀನಾಮೆಗೆ ವಿಪಕ್ಷಗಳು ಪಟ್ಟು ಹಿಡಿದಿದ್ದರೆ ಇತ್ತ ಆಡಳಿತ ಪಕ್ಷ ಯಾವುದೇ ಕಾರಣಕ್ಕೂ ರಾಜೀನಾಮೆ ಇಲ್ಲ ಎಂದು ಕೂತಿದೆ.
ಸಚಿವ ನಾಗೇಂದ್ರ ಮೇಲೆ 87 ಕೋಟಿ ರೂ. ಅವ್ಯವಹಾರದ ಆರೋಪ ಬಂದಿದೆ. ಜೊತೆಗೆ ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ನಲ್ಲಿ ಚಂದ್ರಶೇಖರ್ ಸಚಿವ ನಾಗೇಂದ್ರ ಹೆಸರು ಉಲ್ಲೇಖಿಸಿದ್ದರು. ಹೀಗಾಗಿ ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ವಿಪಕ್ಷ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡಲ್ಲ ಎಂದು ನಾಗೇಂದ್ರ ಹೇಳಿದ್ದಾರೆ. ನನಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ಇಲಾಖೆಯ ಕೆಲಸಗಳಲ್ಲಿ ತಲೆಯೇ ಹಾಕಿಲ್ಲ. ಹಾಗಿದ್ದರೂ ಅವರು ಯಾಕೆ ಡೆತ್ ನೋಟ್ ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ ಎಂದೇ ಗೊತ್ತಿಲ್ಲ ಎಂದಿದ್ದಾರೆ. ವಿಪಕ್ಷಗಳಂತೂ ಈ ಪ್ರಕರಣವನ್ನು ಇಲ್ಲಿಗೇ ಕೈ ಬಿಡಲ್ಲ. ಹೀಗಾಗಿ ನಾಗೇಂದ್ರ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಳ್ಳಾಗಲಿದೆ.