Publish Date: Tue, 28 Feb 2017 (09:35 IST)
Updated Date: Tue, 28 Feb 2017 (09:42 IST)
ಯಲಹಂಕದ ಸರ್ಕಾರಿ ಶಾಲೆಯೊಂದರಲ್ಲಿ ನಡೆದ ವಿದ್ಯಾರ್ಥಿಯೋರ್ವನ ಕೊಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕಾಲೇಜು ವಿದ್ಯಾರ್ಥಿನಿ ಜತೆಗಿನ ಆತನ ವಿಶೇಷ ಸ್ನೇಹವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ.
ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹರ್ಷರಾಜ್ (16)ಎಂಬಾತನನ್ನು ನಿನ್ನೆ ಹತ್ಯೆಗೈಯ್ಯಲಾಗಿತ್ತು. ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ಹರ್ಷನನ್ನು ಆತನ ಸ್ನೇಹಿತರೇ ಚಾಕು ಇರಿದು ಕೊಂದಿದ್ದರು.
ಘಟನೆ ವಿವರ: ಯಲಹಂಕದ ಬಳಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ನಿವಾಸಿ ನಾರಾಯಣಪ್ಪ ಮತ್ತು ಅನ್ನಪೂರ್ಣ ದಂಪತಿಯ ಪುತ್ರ ಹರ್ಷರಾಜ್ ಸೋಮವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಎದುರಾದ ಸಹಪಾಠಿಗಳು ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಹರ್ಷನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ.ಗಂಭೀರವಾಗಿ ಗಾಯಗೊಂಡು ನೆಲಕ್ಕುರುಳಿದ ಹರ್ಷನನ್ನು ಹಲ್ಲೆ ಮಾಡಿದ ಬಾಲಕರು ಆಸ್ಪತ್ರೆ ಬಳಿ ಬಿಟ್ಟು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಕ್ರೀಡೆಯಲ್ಲಿ ಮುಂದಿದ್ದ ಹರ್ಷ ಸೀನಿಯರ್ಸ್ ಜತೆಯೂ ಸ್ನೇಹದಿಂದಿದ್ದ. ಪಿಯುಸಿ ವಿದ್ಯಾರ್ಥಿಯೋರ್ವಳ ಜತೆ ಆತ ಸಲಿಗೆಯಿಂದಿದ್ದು ಕೆಲವು ವಿದ್ಯಾರ್ಥಿಗಳನ್ನು ಕೆರಳಿಸಿತ್ತು. ಇದೇ ವಿಷಯಕ್ಕೆ ಆಗಾಗ ಮಾತಿನ ಚಕಮಕಿ ಕೂಡ ನಡೆಯುತ್ತಿತ್ತು. ಇದೇ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.