Publish Date: Thu, 08 Aug 2024 (14:38 IST)
Updated Date: Thu, 08 Aug 2024 (14:42 IST)
ಕೋಲಾರ: ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಾಗೂ ವರ ಪರಸ್ಪರ ಬಡಿದಾಡಿಕೊಂಡು ಸಾವನ್ನಪ್ಪಿದ್ದ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ವಧುವಿನ ಮನೆಯವರು ಈಗ ಹೊಸ ಆರೋಪ ಮಾಡಿದ್ದಾರೆ. ಅದೇನು ಎಂದು ಇಲ್ಲಿ ನೋಡಿ.
ಕೋಲಾರದಲ್ಲಿ 18 ವರ್ಷದ ಲಿಖಿತ ಶ್ರೀ ಮತ್ತು ನವೀನ್ ಎಂಬವರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ಗಂಟೆಗಳಲ್ಲಿ ದಂಪತಿ ಸಂಬಂಧಿಕರ ಮನೆಗೆ ಹೋಗಿ ಮುಂಬಾಗಿಲು ಹಾಕಿಕೊಂಡು ಪರಸ್ಪರ ಕಿತ್ತಾಡಿಕೊಂಡಿದ್ದು ವಧು ತೀವ್ರ ಗಾಯದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಳು.
ವರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಈ ಮೂಲಕ ಪ್ರೀತಿಸಿ ಮದುವೆಯಾಗಿ ಸುಂದರ ಬದುಕು ಬದುಕಬೇಕಾಗಿದ್ದ ಜೋಡಿ ಕೆಲವೇ ಗಂಟೆಗಳಲ್ಲಿ ದುರಂತ ಅಂತ್ಯ ಕಂಡಿದ್ದರು. ಈ ಪ್ರಕರಣಕ್ಕೆ ಈಗ ಲಿಖಿತಶ್ರೀ ಕುಟುಂಬದವರು ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ವಧು-ವರ ಪರಸ್ಪರ ಹಲ್ಲೆ ನಡೆಸಿದ್ದರಿಂದ ಸಾವಾಗಿದೆ ಎಂಬುದನ್ನು ಅವರು ಒಪ್ಪಲು ತಯಾರಿಲ್ಲ. ಲಿಖಿತ ಮತ್ತು ನವೀನ್ ಇಬ್ಬರೂ ಅನ್ಯೋನ್ಯವಾಗಿದ್ದರು. ಇಬ್ಬರೂ ಬಹಳ ಪ್ರೀತಿಸುತ್ತಿದ್ದರು. ಇದೀಗ ಮದುವೆಯಾದ ತಕ್ಷಣ ಗಲಾಟೆ ಮಾಡಿಕೊಂಡಿದ್ದಾರೆ ಎಂದರೆ ಕುಟುಂಬಸ್ಥರು ನಂಬಲು ತಯಾರಿಲ್ಲ. ಯಾರೋ ಬೇಕೆಂದೇ ಇಬ್ಬರನ್ನೂ ಹೊಡೆದು ಹಾಕಿದ್ದಾರೆ ಎಂದು ಲಿಖಿತ ಕುಟುಂಬಸ್ಥರು ಆರೋಪಿಸಿದ್ದಾರೆ. ಮದುವೆಯಲ್ಲೂ ಇಬ್ಬರೂ ಸಂತೋಷವಾಗಿಯೇ ಇದ್ದರು. ಈಗ ಹೊಡೆದಾಡಿಕೊಂಡಿರುವುದು ಸುಳ್ಳು. ಯಾರೋ ಮೂರನೆಯ ವ್ಯಕ್ತಿಯ ಕೈವಾಡವಿದೆ ಎಂದು ಲಿಖಿತ ಸಹೋದರಿ ಮತ್ತು ತಾತ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಈಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ನೀಡಿದಂತಾಗಿದೆ.