ಬೆಂಗಳೂರು: ಬಿಜೆಪಿಯವರ ಮಕ್ಕಳು ಮಾತ್ರ ಫಾರಿನ್ ನಲ್ಲಿ ಓದಬೇಕಾ ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟಾಂಗ್ ಕೊಟ್ಟಿದ್ದು ನಿಮ್ಮ ಮಕ್ಕಳು ಮಾತ್ರ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಬೇಕಾ ಎಂದಿದ್ದಾರೆ.
ಬಿಜೆಪಿ ನಾಯಕರು ನಿನ್ನೆ ಹಿಂದೂ ಕಾರ್ಯಕರ್ತರ ಮೇಲೆ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಮಂಗಳೂರಿಗೆ ತೆರಳಿ ಡಿಸಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಸುಹಾಸ್ ಶೆಟ್ಟಿ ಪ್ರಕರಣವನ್ನು ಕೇಂದ್ರವೇ ಎನ್ಐಎಗೆ ವಹಿಸಿದೆ. ಈ ಹಿನ್ನಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಇನ್ನೇನು ಕೆಲಸ? ಹೆಣದ ಮೇಲೆ ರಾಜಕೀಯ ಮಾಡೋದೇ ಕೆಲಸ. ಈ ಹಿಂದೆ ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಇದೇ ಬಿಜೆಪಿ ನಾಯಕರು ಒತ್ತಾಯಿಸಿದರು. ಕೊನೆಗೆ ಸಿಬಿಐ ತನಿಖೆ ನಡೆದು ನಮ್ಮ ಕರ್ನಾಟಕದ ಫೊರೆನ್ಸಿಕ್ ವರದಿಯಂತೇ ಅವರೂ ಇದು ಸಹಜ ಸಾವು ಎಂದು ವರದಿ ನೀಡಿದರು. ಬಿಜೆಪಿಯವರು ಯಾವತ್ತಾದ್ರೂ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರಾ? ಇಷ್ಟು ಸಂಸದರು ಯಾವತ್ತಾದ್ರೂ ಕರ್ನಾಟಕಕ್ಕೆ ಏನಾದ್ರೂ ಅನುದಾನ ತಂದ್ರಾ?
ಕೇವಲ ಮೋದಿ ಜಪ ಮಾಡೋದು, ಅವರ ಟ್ವೀಟ್ ಗಳನ್ನು ರಿಟ್ವೀಟ್ ಮಾಡೋದು ವಿಶ್ವ ಗುರು ಎನ್ನುವುದು ಇಷ್ಟೇ ಆಯ್ತು. ಕೇಸರಿ ಶಾಲು ಹಾಕೋದು, ಗೋ ಹತ್ಯೆ ಬಗ್ಗೆ ಮಾತನಾಡೋದು ಇವಿಷ್ಟೇ ಅವರ ಕೆಲಸ. ಬಿಜೆಪಿ ನಾಯಕರು ಹೇಗೆ ಅಂದರೆ ಅವರ ಮಕ್ಕಳು ಮಾತ್ರ ಫಾರಿನ್ ನಲ್ಲಿ ಓದಬೇಕು. ಬೇರೆಯವರು ಮಕ್ಕಳು ಏನಾದ್ರೂ ತೊಂದರೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಹೇಳಿಕೆಗೆ ನೆಟ್ಟಿಗರು ವ್ಯಂಗ್ಯ ಮಾಡಿದ್ದಾರೆ. ಯಾವ ಪಕ್ಷವೇ ಆದರೂ ರಾಜಕಾರಣಿಗಳೆಲ್ಲಾ ಒಂದೇ. ನಿಮ್ಮ ಮಕ್ಕಳೇನು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೀರಾ? ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ನಿಮ್ಮ ಮಕ್ಕಳು ಮಾತ್ರ ಕೊಹ್ಲಿ ಜೊತೆ ಸೆಲ್ಫೀ ತೆಗೆದುಕೊಳ್ಳಬೇಕು ಬೇರೆಯವರ ಮಕ್ಕಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದರೂ ಚಿಂತೆಯಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.