Publish Date: Wed, 21 Aug 2019 (20:01 IST)
Updated Date: Wed, 21 Aug 2019 (20:03 IST)
ಆ ಗ್ರಾಮಗಳಲ್ಲಿ ಸಂಜೆಯಾದರೆ ಸಾಕು ಕವಿಯುವ ಕತ್ತಲೆ, ರಾತ್ರಿಯಾದರೆ ಸಾಕು ಸೊಳ್ಳೆಗಳ ಕಾಟ, ಉಸಿರಾಡುವ ಗಾಳಿಯೂ ವಿಷಗಾಳಿಯಿಂದ ಕಲುಷಿತ, ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಳವರೆಗೆ ನಿತ್ಯದ ಅಲೆದಾಟ.
ಬೆಳಗಾವಿ ಜಿಲ್ಲೆಯಲ್ಲಿ ಕೆಲ ತಿಂಗಳ ಹಿಂದಷ್ಟೇ ಆವರಿಸಿದ್ದ ಬರದ ಗಾಯದ ಮೇಲೆ ಉಪ್ಪು ಸುರಿದಂತೆ ಕಳೆದ ಇಪ್ಪತ್ತು ದಿನಗಳಲ್ಲಿ ಪ್ರವಾಹದ ಭೀಕರತೆಯನ್ನು ತಂದ ವರುಣ ಅಕ್ಷರಶಃ ಕೃಷ್ಣಾ ನದಿ ತೀರದ ನೆರೆ ಸಂತ್ರಸ್ಥರನ್ನು ಬೀದಿಗೆ ತಳ್ಳಿದ್ದಾನೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸದ್ಯ ತಂಗಡಿ, ಶಿನಾಳ, ಕಾತ್ರಾಳ ಮತ್ತು ಮೋಳೆ ಗ್ರಾಮಗಳ ತೋಟದ ವಸತಿಯ ನೂರಕ್ಕೂ ಹೆಚ್ಚು ಕುಟುಂಬಗಳು ಬದುಕು ಕಟ್ಟಿಕೊಳ್ಳಲು ಪರದಾಡುತ್ತಿವೆ.
ರಸ್ತೆ ಪಕ್ಕದ ಎರಡು ಬದಿಗಳಲ್ಲಿ ದನಕರುಗಳನ್ನು ಕಟ್ಟಿ, ಮನೆಯ ಮಹಿಳೆಯರು, ಮಕ್ಕಳು, ವಯೋವೃದ್ದರ ಜೊತೆಗೆ ತಗಡಿನ ಶೆಡ್ಡುಗಳನ್ನೆ ಆಸರೆ ಮಾಡಿಕೊಂಡು ಜನರು ಜೀವನ ಸಾಗಿಸುತ್ತಿರುವದು ಮನಸು ಕಲಕುತ್ತದೆ.
ಇನ್ನೊಂದು ಕಡೆ ಚಿಕ್ಕೋಡಿ ತಾಲೂಕಿನ ಯಡೂರ, ಚಂದೂರ, ಅಂಕಲಿ, ಮಾಂಜರಿ ಗ್ರಾಮಗಳಲ್ಲಿ ಮತ್ತು ರಾಯಭಾಗ ತಾಲೂಕಿನ ಹಲವೆಡೆ ಜನರು ತಮ್ಮ ಮನೆಗಳಿಗೆ ತೆರಳುತ್ತಿದ್ದರೆ ಕಾಳಜಿ ಕೇಂದ್ರಗಳಿಂದ ಮನೆಗಳಿಗೆ ವಾಪಸ್ ಆದವರ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ.