Publish Date: Mon, 19 Jul 2021 (17:48 IST)
Updated Date: Mon, 19 Jul 2021 (17:51 IST)
ಕಾಫಿಯಲ್ಲಿ ಬೆರೆಸಿದ್ದ ನಿದ್ದೆ ಮಾತ್ರೆ ಸೇವಿಸಿ ನಿದ್ದೆಗೆ ಜಾರಿದ ಪತಿಯ ಮರ್ಮಾಂಗದ ಮೇಲೆ ಹಲ್ಲೆ ಮಾಡಿ ಕೊಂದ ಪ್ರಕರಣವನ್ನು 9 ತಿಂಗಳ ನಂತರ ಭೇದಿಸಿದ ಮೈಸೂರು ಜಿಲ್ಲೆಯ ಬನ್ನೂರು ಪೊಲೀಸರು ಪ್ರಿಯಕರ ಹಾಗೂ ಪತ್ನಿಯನ್ನು ಬಂಧಿಸಿದ್ದಾರೆ.
ಪತ್ನಿ ಉಮಾ (29) ಹಾಗೂ ಪ್ರಿಯಕರ ಅವಿನಾಶ್ ಬಂಧಿತ ಆರೋಪಿಗಳು. ಮಂಡ್ಯ ಜಿಲ್ಲೆ ಹೊನಗಾನಹಳ್ಳಿ ಗ್ರಾಮದ ನಿವಾಸಿ ವೆಂಕಟರಾಜು (50) ಕೊಲೆಯಾದ ದುರ್ದೈವಿ.
ಅಕ್ಟೋಬರ್ 2020ರಂದು ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹುಣಸಗಳ್ಳಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಕೊಲೆಯ ಹಿಂದಿನ ಅಸಲಿಯತ್ತು ತಿಳಿದು ಬೆಚ್ಚಿಬಿದ್ದಿದ್ದಾರೆ.
ವೆಂಕಟರಾಜು 10 ವರ್ಷದ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಬಳ್ಳೆಕರೆ ಗ್ರಾಮದ ನಿವಾಸಿ ಉಮಾಳನ್ನು ಮದುವೆಯಾಗಿದ್ದು, 8 ವರ್ಷದ ಒಂದು ಹೆಣ್ಣು ಮಗು 6 ವರ್ಷದ ಗಂಡು ಮಗುವಿದೆ. ವಯಸ್ಸಿನ ಅಂತರ ಹೆಚ್ಚಾಗಿ ಇದ್ದಿದ್ದರಿಂದ ಇಬ್ಬರ ನಡುವೆ ಪದೇಪದೆ ಜಗಳ ನಡೆಯುತ್ತಿತ್ತು.
ಈ ವೇಳೆ ಉಮಾಗೆ ಪಕ್ಕದ ಮನೆಯ ನಿವಾಸಿ ಪರಿಚಯವಾಗಿದ್ದ ಅವಿನಾಶ್ ಪರಿಚಯವಾಗಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿದ್ದು, ಇಬ್ಬರು ಸೇರಿ ವೆಂಕಟರಾಜು ಕೊಲೆ ಮಾಡಲು ನಿರ್ಧರಿಸಿದ್ದಾರೆ.
ಅವಿನಾಶ್ ತನ್ನ ಅಜ್ಜಿ ಮನೆ ಹುಣಸಗಳ್ಳಿಗೆ ವೆಂಕಟರಾಜುನನ್ನು ಕರೆಸಿಕೊಂಡಿದ್ದು, ಕಾಫಿಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ್ದು, ನಿದ್ರಾವಸ್ಥೆಯಲ್ಲಿದ್ದಾಗ ಖಾಸಗಿ ಭಾಗಕ್ಕೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಸ್ವಾಭಾವಿಕ ಸಾವು ಎಂಬಂತೆ ಪತ್ನಿ ಉಮಾ ನಾಟಕವಾಡಿದ್ದಳು.