ಮೈಸೂರು: ಶಾಲಾ ಶೈಕ್ಷಣಿಕ ಪ್ರವಾಸ ಇಲ್ಲವೇ ಕುಟುಂಬ ಸಮೇತರಾಗಿ ವೀಕೆಂಡ್ ನಲ್ಲಿ ಒಮ್ಮೆ ಮೈಸೂರು ನೋಡಿ ಬರೋಣವೆಂದು ಹೋದರೆ ಈಗ ನಿಮಗೆ ಎಂಟ್ರಿ ಫೀಸ್ ಕೇಳಿಯೇ ಶಾಕ್ ಆಗಬಹುದು.
ಮೈಸೂರು ಪ್ರವಾಸ ಮಾಡುವವರು ಕೆಆರ್ ಎಸ್ ಡ್ಯಾಮ್ ಗೆ ಭೇಟಿ ಕೊಟ್ಟೇ ಕೊಡುತ್ತಾರೆ. ಮೈಸೂರಿನ ಪ್ರಮುಖ ಆಕರ್ಷಣೆಯೇ ಇದು. ಅದರಲ್ಲೂ ಸಂಜೆ ವೇಳೆ ವರ್ಣಾಲಂಕೃತ ದೀಪದಲ್ಲಿ ಕಾರಂಜಿ ನೋಡುವುದೇ ಒಂದು ಖುಷಿ.
ಆದರೆ ಈಗ ಮೈಸೂರಿನಲ್ಲಿ ಕೆಆರ್ ಎಸ್ ಬೃಂದಾವನ ಉದ್ಯಾನ ನೋಡಲು ಹೋಗಬೇಕಾದರೆ ಎಂಟ್ರಿ ಶುಲ್ಕ ದುಪ್ಪಟ್ಟು ಕೊಡಬೇಕು. ಸರ್ಕಾರ ಇದ್ದಕ್ಕಿದ್ದಂತೆ ಪ್ರವೇಶ ಶುಲ್ಕವನ್ನು ಏರಿಕೆ ಮಾಡಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇದುವರೆಗೆ ಪ್ರವೇಶ ಶುಲ್ಕ ವಯಸ್ಕರಿಗೆ 50 ರೂ. ಮಕ್ಕಳಿಗೆ 10 ರೂ. ಎಂದಿತ್ತು. ಆದರೆ ಈಗ ಏಕಾಏಕಿ ದುಪ್ಪಟ್ಟು ಮಾಡಲಾಗಿದೆ. ಅಂದರೆ ವಯಸ್ಕರಿಗೆ 100 ರೂ., ಮಕ್ಕಳಿಗೆ 50 ರೂ. ಎಂಟ್ರಿ ಫೀಸ್ ಆಗಿದೆ. ಸರ್ಕಾರ ಸದ್ದಿಲ್ಲದೇ ಫೀಸ್ ಹೆಚ್ಚಳ ಮಾಡಿದ್ದು, ಆ ಮೂಲಕ ತನ್ನ ಖಜಾನೆ ತುಂಬಿಸಲು ಮಾರ್ಗವೊಂದನ್ನು ಕಂಡುಕೊಂಡಿದೆ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಶುಲ್ಕ ಹೆಚ್ಚಿಸಿರುವುದು ತಪ್ಪಲ್ಲ. ಆದರೆ ಏಕಾಏಕಿ ದುಪ್ಪಟ್ಟು ಹೆಚ್ಚಿಸಿರುವುದಕ್ಕೆ ಪ್ರವಾಸಿಗರಿಂದ ವಿರೋಧ ವ್ಯಕ್ತವಾಗಿದೆ.