Publish Date: Thu, 31 Aug 2023 (16:18 IST)
Updated Date: Thu, 31 Aug 2023 (17:28 IST)
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಭರ್ಜರಿ ತಯಾರಿ ಶುರುವಾಗಿದೆ. ಈ ವರ್ಷ ಮೈಸೂರು ದಸರಾ ಮತ್ತಷ್ಟು ಕಳೆ ಕಟ್ಟಲಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ಹಸಿರು ಮತ್ತು ಕೆಂಪು ಬಣ್ಣದ ರೇಷ್ಮೆ ಸೀರೆ ಜೊತೆ ಫಲ ತಾಂಬೂಲ ಸಮರ್ಪಸಿ ಹರಕೆ ಸಲ್ಲಿಸಿದ್ದಾರೆ. ಇದೇ ವೇಳೆ ಈ ಬಾರಿಯ ದಸರಾ ಉದ್ಘಾಟಕರನ್ನು ಘೋಷಿಸಿದ್ದು, ನಾಡಿನ ಹೆಸರಾಂತ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸುವುದಾಗಿ ಘೋಷಿಸಿದ್ದಾರೆ.
ಮೈಸೂರು ದಸರಾ ಹಬ್ಬಕ್ಕೆ ದಿನಾಂಕ (ಅಕ್ಟೋಬರ್ 15) ಬೆಳಿಗ್ಗೆ 10.15 ರಿಂದ 10.30 ಕ್ಕೆ ಸಲ್ಲುವ ಮಹೂರ್ತದಲ್ಲಿ ಉದ್ಘಾಟನೆ ನೆರವೇರಲಿದ್ದು, ಪಂಜಿನ ಕವಾಯತು ವಿಜಯದಶಮಿ ದಿನದಂದು ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ರೈತರ ದಸರಾ, ಯುವ ದಸರಾ ಎಲ್ಲವನ್ನು ವ್ಯವಸ್ಥಿತವಾಗಿ ಆಚರಿಸಲು ತೀರ್ಮಾನಿಸಲಾಗಿದೆ.ಜಂಬೂ ಸವಾರಿ, ದೀಪಾಲಂಕಾರ, ಪಂಜಿನ ಕವಾಯತು ಬಹಳ ಮುಖ್ಯವಾಗಿ ಆಚರಿಸಲ್ಪಡುತ್ತದೆ. ಈ ಬಾರಿ ದೀಪಾಲಂಕಾರ ದಸರಾ ಉದ್ಘಾಟನೆಯಾದ ದಿನದಿಂದ ದಸರಾ ಮುಗಿಯುವವರೆಗೂ ಹಾಗೂ ನಂತರ ಒಂದು ವಾರದವವರೆಗೆ ದೀಪಾಲಂಕಾರ ಇರಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಬೇಕು ಮತ್ತು ದಸರಾ ಜನರ ಉತ್ಸವವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ರು. ನಾಡ ಹಬ್ಬ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ.
ಸಂಗೀತ ಮಾಂತ್ರಿಕ, ಸ್ಯಾಂಡಲ್ವುಡ್ನ ನಾದಬ್ರಹ್ಮ ಅಂತಲೇ ಖ್ಯಾತಿ ಪಡೆದ ಸಂಗೀತ ನಿರ್ದೇಶಕ ಹಾಗೂ ಗೀತ ರಚನಕಾರ ಹಂಸಲೇಖ ಅವರು. ತಮ್ಮ ಸಂಗೀತದಿಂದ ಕನ್ನಡ ಚಿತ್ರರಂಗವನ್ನ ಮತ್ತೊಂದು ಹತ್ತಕ್ಕೆ ಕೊಂಡೊಯ್ದಿದ್ದಾರೆ. ಕನ್ನಡ ನಾಡು-ನುಡಿ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಹಂಸಲೇಖ ಅವರು ಕ್ಷಣದಲ್ಲೇ ಜಾನಪದ ಹಾಗೂ ಸಿನಿಮಾ ಹಾಡುಗಳನ್ನ ರಚಿಸುವುದರಲ್ಲಿ ನಿಪುಣರು, ಈ ಬಾರಿ ಹಂಸಲೇಖ ಅವರು ದಸರಾ ಉದ್ಘಾಟಿಸುತ್ತಿರುವುದು ಖುಷಿಗ ವಿಚಾರವಾಗಿದೆ.