Publish Date: Fri, 17 Jul 2020 (21:12 IST)
Updated Date: Fri, 17 Jul 2020 (21:13 IST)
ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಾದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆರಂಭಕ್ಕೆ ನಿರಾಣಿ ಷುಗರ್ಸ್ ಮಾಲೀಕರಾದ ಮುರುಗೇಶ್ ನಿರಾಣಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಕಾರ್ಖಾನೆಯ ಆವರಣದಲ್ಲಿನ ಕಟ್ಟಡ ಹಾಗೂ ಆಡಳಿತ ಕಛೇರಿಯ ಕಟ್ಟಡಗಳು ಸುಣ್ಣಬಣ್ಣಗಳನ್ನು ಕಾಣುತ್ತಿದ್ದು, ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ಆಗಸ್ಟ್ ತಿಂಗಳಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಶತಾಯಗತಾಯ ಆರಂಭಿಸಲೇಬೇಕೆಂದು ಪಣತೊಟ್ಟಿರುವ ನಿರಾಣಿ ಅವರು ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಕೈಗೊಂಡಿರುವುದು ಪಾಂಡವಪುರ ತಾಲ್ಲೂಕಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಾರ್ಖಾನೆಯ ಯಂತ್ರೋಪಕರಣಗಳ ದುರಸ್ಥಿ ಕಾರ್ಯವು ಭರದಿಂದ ಸಾಗಿದೆ. ಕಬ್ಬು ಕಟಾವು ಮಾಡಲು ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಿಂದ ಐದು ಸಾವಿರಕ್ಕೂ ಹೆಚ್ಚಿನ ಕೃಷಿಕೂಲಿ ಕಾರ್ಮಿಕರನ್ನು ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ.