Publish Date: Sun, 22 Sep 2019 (21:26 IST)
Updated Date: Sun, 22 Sep 2019 (21:29 IST)
ಎಣ್ಣೆ ಬೇಕು ಅಣ್ಣಾ... ಎಂ ಎಸ್ ಐ ಎಲ್ ಎಣ್ಣೆನೇ ಬೇಕು ತಮ್ಮಾ ಎಂಬ ಮಾತುಗಳು ಬಲವಾಗಿ ಕೇಳಿಬರಲಾರಂಭಿಸಿವೆ.
ಹೈ ಹೋಲ್ಟೇಜ್ ಕ್ಷೇತ್ರ ಎಂದೇ ಗುರುತಿಸಿಕೊಂಡಿರುವ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ಸಣ್ಣ ವಿಷಯಗಳು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಎಣ್ಣೆ ರಾಜಕೀಯ ಶುರುವಾಗಿದೆ. ಎಂ ಎಸ್ ಐ ಎಲ್ ಮಳಿಗೆ ಮುಚ್ಚಿಸುವಂತೆ ಒಂದು ಬಣ ಹೋರಾಟ ಮಾಡಿದ್ರೆ, ಇದರ ಬೆನ್ನಲ್ಲೇ ಮತ್ತೊಂದು ಬಣ ಎಂ ಎಸ್ ಐ ಎಲ್ ಉಳಿಸಿ, ಖಾಸಗೀ ವೈನ್ ಸ್ಟೋರ್ ಗಳನ್ನ ಮುಚ್ಚಿಸಿ ಎಂದು ಪ್ರತಿಭಟನೆ ಮಾಡಿದರು. ಖಾಸಗಿ ವೈನ್ ಸ್ಟೋರ್ ಗಳ ಮುಂದೆ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಬಳಿಕ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಗೌರಿಶಂಕರ್, ಎಂ ಎಸ್ ಐ ಎಲ್ ನಿಗಮ ಮಂಡಳಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹೋಬಳಿಗೊಂದು ಎಂ ಎಸ್ ಐ ಎಲ್ ಮದ್ಯದಂಗಡಿ ಮಳಿಗೆ ತೆರೆಯಬೇಕೆಂಬ ಸರ್ಕಾರದ ನಿಯಮದಂತೆ ಹೆಬ್ಬೂರಿಗೆ ಎಂ ಎಸ್ ಐ ಎಲ್ ಮದ್ಯ ಮಾರಾಟ ಮಳಿಗೆ ಮಂಜೂರು ಮಾಡಿದ್ದರು. ಈಗಾಗಲೇ ಹೆಬ್ಬೂರಿಲ್ಲಿ ನಾಲ್ಕೈದು ಖಾಸಗಿ ವೈನ್ ಸ್ಟೋರ್, ಬಾರ್ ಗಳಿದ್ದು ಅಧಿಕ ಬೆಲೆ, ಕಳಪೆ ಗುಣಮಟ್ಟದ ಮಧ್ಯವನ್ನ ಮಾರಾಟ ಮಾಡುತ್ತಿದ್ದಾರೆ ಎಂದು ಗುಣಮಟ್ಟದ ಮದ್ಯ, ಕಡಿಮೆ ಬೆಲೆಯ ಎಂ ಎಸ್ ಐ ಎಲ್ ಗೆ ಜನರು ಮುಗಿಬಿದ್ದಿದ್ದಾರೆ.
ಹೀಗಾಗಿ ಎಂ ಎಸ್ ಐ ಎಲ್ ಮಳಿಗೆ ತೆರೆದ ಒಂದು ವಾರದಲ್ಲೆ ಖಾಸಗಿ ವೈನ್ ಸ್ಟೋರ್ ಗಳಿಗೆ ಲಕ್ಷಗಟ್ಟಲೇ ನಷ್ಟ ವುಂಟಾಗಿದೆ ಎನ್ನಲಾಗಿದೆ. ಇದರಿಂದ ಖಾಸಗಿ ವೈನ್ ಸ್ಟೋರ್ ಹಾಗೂ ಬಾರ್ ಮಾಲಿಕರು ಮಾಜಿ ಶಾಸಕ ಸುರೇಶ್ ಗೌಡ ಮುಖಾಂತರ ಸರ್ಕಾರದ ಮೇಲೆ ಒತ್ತಡ ತಂದು ಎಂ ಎಸ್ ಐ ಎಲ್ ಮುಚ್ಚಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.