ಬೆಂಗಳೂರು: ಲೋ ತಮ್ಮಾ ಮೆಟ್ರೊ ದರ ಏರಿಕೆ ಮಾಡಲು ಒಪ್ಪಿಗೆ ಕೊಟ್ಟಿದ್ದು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಅಲ್ಲ. ಹೀಗಂತ ಮೆಟ್ರೊ ದರ ಏರಿಕೆ ವಿರುದ್ಧ ಟ್ವೀಟ್ ಮಾಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ರೋಲ್ ಗೊಳಗಾಗಿದ್ದಾರೆ.
ನಿನ್ನೆಯಿಂದ ನಮ್ಮ ಮೆಟ್ರೊ ಪ್ರಯಾಣ ದರದಲ್ಲಿ ಭಾರೀ ಏರಿಕೆಯಾಗಿದೆ. ಇದರ ಬಗ್ಗೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇನ್ನು ಮುಂದೆ ನಮಗೆ ಮೆಟ್ರೊ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಇದರ ನಡುವೆ ಈಗ ಮೆಟ್ರೊ ಪ್ರಯಾಣ ದರ ಏರಿಕೆ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ.
ಬಿಜೆಪಿ ನಾಯಕರು ಮೆಟ್ರೊ ದರ ಏರಿಕೆಗೆ ಕರ್ನಾಟಕ ಸರ್ಕಾರವನ್ನು ದೂಷಿಸುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವೇ ಕಾರಣ ಎನ್ನುತ್ತಿದ್ದಾರೆ. ಮೆಟ್ರೊ ದರ ಏರಿಕೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಟ್ವೀಟ್ ಗೆ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಮೆಟ್ರೊಗೆ ಜಾಗ, ಕಟ್ಟಲು ಹಣ ಮಾತ್ರ ರಾಜ್ಯ ಸರ್ಕಾರ ಕೊಡುತ್ತದೆ. ಅದರ ನಿಯಂತ್ರಣವೆಲ್ಲಾ ಕೇಂದ್ರದ ಬಳಿಯೇ ಇರುತ್ತದೆ ಎಂದು ಒಬ್ಬರು ಟಾಂಗ್ ಕೊಟ್ಟರೆ ಮತ್ತೊಬ್ಬರು ಮೆಟ್ರೊ ದರ ಏರಿಕೆಗೆ ರಾಜ್ಯ ಸರ್ಕಾರವನ್ನು ಯಾಕೆ ದೂಷಿಸುತ್ತೀರಿ, ನಿಮ್ಮ ಕೇಂದ್ರವನ್ನು ಹೋಗಿ ಕೇಳಿ. ಬಿಎಂಆರ್ ಸಿಎಲ್ ಕಮಿಟಿಯ ದರ ಏರಿಕೆ ಪ್ರಸ್ತಾವನೆಗೆ ಒಪ್ಪಿಗೆ ಕೊಡುವುದು ಕೇಂದ್ರ ಸರ್ಕಾರ. ಕೇಂದ್ರ ಯಾಕೆ ದರ ಏರಿಕೆಯನ್ನು ಒಪ್ಪಿಕೊಂಡಿತು ಎಂದು ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ದರ ಕಡಿಮೆ ಮಾಡಿ ಎಂದು ಹಲವರು ಟ್ರೋಲ್ ಮಾಡಿದ್ದಾರೆ.