ಬೆಂಗಳೂರು: ಬಸನಗೌಡ ಯತ್ನಾಳ್ ಬಣ ಬಿವೈ ವಿಜಯೇಂದ್ರ ಮತ್ತು ಆಪ್ತರ ಮೇಲೆ ಹೊಂದಾಣಿಕೆ ರಾಜಕೀಯದ ಆರೋಪ ಮಾಡುತ್ತಿದ್ದರೆ ಇತ್ತ ರೇಣುಕಾಚಾರ್ಯ ಇಂದು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದಾರೆ.
ವಿಜಯೇಂದ್ರ ಬಣದ ಜೊತೆ ರೇಣುಕಾಚಾರ್ಯ ಗುರುತಿಸಿಕೊಂಡಿದ್ದಾರೆ. ಯತ್ನಾಳ್ ವಿರುದ್ಧ ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸುತ್ತಲೇ ಇದ್ದರು. ಬಹುಶಃ ಯತ್ನಾಳ್ ಅವರೇ ಕಾಂಗ್ರೆಸ್ ಜೊತೆ ಕೈ ಜೋಡಿಸಿರಬೇಕು ಎಂದು ಆರೋಪ ಮಾಡಿದ್ದರು.
ಈ ಆರೋಪಗಳ ನಡುವೆ ಇಂದು ರೇಣುಕಾಚಾರ್ಯ ಡಿಕೆಶಿಯನ್ನು ಭೇಟಿ ಮಾಡಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಭೇಟಿಯಾಗಿರುವ ಕಾರಣ ಕೇಳಿದ್ದಕ್ಕೆ ರೇಣುಕಾಚಾರ್ಯ ಇದರಲ್ಲಿ ರಾಜಕೀಯ ಏನೂ ಇಲ್ಲ ಎಂದಿದ್ದಾರೆ.
ನಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಕೊಡಿ. ಕೆಲವು ಅರ್ಧಕ್ಕೇ ನಿಂತ ಯೋಜನೆಗಳನ್ನು ಮುಂದುವರಿಸಿ ಎಂದು ಕೇಳಿಕೊಳ್ಳಲು ಹೋಗಿದ್ದೆ ಅಷ್ಟೇ. ಇದರ ಹೊರತು ಬೇರೆ ಏನೂ ಚರ್ಚೆ ಮಾಡಿಲ್ಲ ಎಂದಿದ್ದಾರೆ.