Publish Date: Sat, 13 Aug 2022 (12:05 IST)
Updated Date: Sat, 13 Aug 2022 (12:08 IST)
ಬೆಂಗಳೂರು : ಜುಲೈ 28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ತುಂಬಿದ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಸಮಾವೇಶ ನಡೆಸಲು ಉದ್ದೇಶಿಸಲಾಗಿತ್ತು.
ಬಳಿಕ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದಾಗಿತ್ತು. ಇದೀಗ ಸರ್ಕಾರ ಜನೋತ್ಸವವನ್ನು ಮತ್ತೆ ನಡೆಸಲು ತೀರ್ಮಾನಿಸಿದೆ.
ಜುಲೈ 28ರ ಜನೋತ್ಸವ ಸಮಾವೇಶ ದಕ್ಷಿಣ ಕನ್ನಡದಲ್ಲಿ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೆ ದೊಡ್ಡಬಳ್ಳಾಪುರದಲ್ಲೇ ಸಮಾವೇಶ ನಡೆಸಲು ಸರ್ಕಾರ ಮುಂದಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆ ಮತ್ತು ಸಿದ್ದರಾಮೋತ್ಸವ ಬಳಿಕ ಕಳೆದುಕೊಂಡಿದ್ದ ರಾಜಕೀಯ ಚಾರ್ಮ್ ಪಡೆದುಕೊಳ್ಳಲು, ಪಕ್ಷ, ಸರ್ಕಾರದಲ್ಲಿ ಉತ್ಸಾಹ ತರಲು ದೊಡ್ಡಬಳ್ಳಾಪುರ ಜನೋತ್ಸವ ನಡೆಸಲು ನಿರ್ಧರಿಸಲಾಗಿದೆ. ಇದೇ ತಿಂಗಳ 28 ರಂದು ದೊಡ್ಡಬಳ್ಳಾಪುರದಲ್ಲೇ ಸಮಾವೇಶ ನಡೆಸಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ.