Publish Date: Fri, 14 Aug 2026 (12:08 IST)
Updated Date: Fri, 14 Aug 2026 (12:11 IST)
ಮಂಡ್ಯ/ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಆರತಿ ಉಕ್ಕಡ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೇಲೆ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್ ಗೌಡ ಅವರ ಮಗಳು ಹಲ್ಲೆ ನಡೆಸಿ, ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಘಟನೆಯ ಹಿನ್ನೆಲೆ:
ಆಗಸ್ಟ್ 12ರ ಭೀಮನ ಅಮಾವಾಸ್ಯೆಯ ಅಂಗವಾಗಿ ಆರತಿ ಉಕ್ಕಡ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಭಕ್ತರ ದಟ್ಟಣೆ ಇದ್ದ ಹಿನ್ನೆಲೆಯಲ್ಲಿ, ಮಂಡ್ಯ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಬಿ. ಪೊಲೀಸ್ ಪಾಟೀಲ್ ಅವರನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ರಾತ್ರಿ ಸುಮಾರು 8:15 ರ ವೇಳೆಗೆ ದರ್ಶನ ಪಡೆಯುವ ವಿಚಾರದಲ್ಲಿ ಶಾಸಕರ ಮಗಳು ಐಶ್ವರ್ಯ (ಎಸಿಪಿ ಗೌತಮ್ ಅವರ ಪತ್ನಿ) ಹಾಗೂ ಪಿಎಸ್ಐ ನಡುವೆ ವಾಗ್ವಾದ ನಡೆದಿದೆ. ದರ್ಶನ ತಡವಾಯಿತು ಎಂಬ ಕಾರಣಕ್ಕೆ ಐಶ್ವರ್ಯ ಅವರು ಪಿಎಸ್ಐ ಸವಿತಾ ಅವರ ಮೇಲೆ ಅಸಭ್ಯ ಪದಗಳಿಂದ ನಿಂದಿಸಿ, ಕಪಾಳಕ್ಕೆ ಹೊಡೆದು, ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪಿಎಸ್ಐ ನೀಡಿದ ದೂರಿನ ಆಧಾರದ ಮೇಲೆ ಕ್ಯಾತನಾಹಳ್ಳಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಪಿಎಸ್ಐ ಸವಿತಾ ಅವರೇ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಶಾಸಕರ ಮಗಳ ಕಡೆಯಿಂದಲೂ ಪ್ರತಿ ದೂರು ದಾಖಲಾಗಿದೆ. ಇನ್ನು, ತಮ್ಮ ಪುತ್ರಿಯ ರದ್ದಾಂತ ವೈರಲ್ ಆಗುತ್ತಿದ್ದಂತೇ ಶಾಸಕ ಸುರೇಶ್ ಗೌಡ ಮಾಧ್ಯಮಗಳ ಮುಂದೆ ಮಗಳ ಪರವಾಗಿ ಕ್ಷಮೆ ಕೋರಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ