Publish Date: Thu, 25 Jul 2024 (13:07 IST)
Updated Date: Thu, 25 Jul 2024 (13:10 IST)
ಬೆಂಗಳೂರು: ಕರ್ನಾಟಕದಲ್ಲಿ ನೀಟ್ ಪರೀಕ್ಷೆಯನ್ನು ರದ್ದತಿ ಮಾಡಬೇಕು ಎಂದು ನಿರ್ಣಯ ಮಂಡಿಸಲಾಗಿತ್ತು. ಈ ನಡುವೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಪ್ರದೀಪ್ ಈಶ್ವರ್ ಮಾಧ್ಯಮಗಳ ಮುಂದೆ ನೀಟ್ ರದ್ದತಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಎಲ್ಲರಿಗೂ ಗೊತ್ತಿರುವ ಹಾಗೆ ಪ್ರದೀಪ್ ಈಶ್ವರ್ ತಮ್ಮದೇ ಪರಿಶ್ರಮ ಅಕಾಡಮಿ ಮೂಲಕ ನೀಟ್ ಪರೀಕ್ಷೆಗೆ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ ಇಂದು ಮಾಧ್ಯಮಗಳ ಮುಂದೆ ನೀಟ್ ರದ್ದಾಗಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಈಗ ನಾನು ಒಬ್ಬ ಟೀಚರ್ ಆಗಿ ಹೇಳಲಾ? ಶಾಸಕನಾಗಿ ಹೇಳ್ಬೇಕಾ? ಒಬ್ಬ ಟೀಚರ್ ಆಗಿ ಹೇಳುವುದಾದರೆ ನನಗಿರುವ ಸ್ಪಷ್ಟ ಮಾಹಿತಿ ಪ್ರಕಾರ ನೀಟ್ ಪರೀಕ್ಷೆಯನ್ನು ತಮಿಳುನಾಡು ಮತ್ತು ಕರ್ನಾಟಕ ಕ್ಯಾಬ್ ಕ್ಯಾನ್ಸಲ್ ಮಾಡಿ ಸಿಇಟಿಯಲ್ಲೇ ಸೀಟು ಕೊಡಿಸೋಣ ಎಂದು ತೀರ್ಮಾನ ಮಾಡಿದೆ. ಒಬ್ಬ ಶಾಸಕನಾಗಿ ಇದಕ್ಕೆ ಬೆಂಬಲವಿದೆ. ಆದರೆ ಇದರ ಮುಂದುವರಿದು ಈ ತೀರ್ಮಾನ ಸುಪ್ರೀಂಕೋರ್ಟ್ ಗೆ ಹೋಗುತ್ತೆ. ಆದರೆ ಸುಪ್ರೀಂಕೋರ್ಟ್ ನಲ್ಲಿ ಇದು ನಿಲ್ಲಲ್ವೇನೋ ಎಂದು ನನಗನಿಸುತ್ತದೆ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ಕೊಟ್ಟಿದ್ದಾರೆ.
ಯಾಕೆಂದರೆ ತಮಿಳುನಾಡಿನಲ್ಲಿ ನೀಟ್ ರದ್ದತಿಗೆ ಸುಗ್ರೀವಾಜ್ಞೆ ಹೊರಡಿಸಿದ್ದರು. ಆದರೂ ಆಗಲಿಲ್ಲ. ಬಹಳಷ್ಟು ಜನ ಹೇಳ್ತಾ ಇದ್ದರು. ನೀಟ್ ಮರುಪರೀಕ್ಷೆ ಆಗುತ್ತೆ ಅಂತ. ಆದರೆ ನಾನು ಮೊದಲೇ ಹೇಳಿದ್ದೆ. ಯಾವುದೋ ಎರಡು ಸೆಂಟರ್ ನಲ್ಲಿ ಅಕ್ರಮ ನಡೆದಿದೆ ಎಂದರೆ 24 ಲಕ್ಷ ಜನಕ್ಕೆ ಸಮಸ್ಯೆ ಮಾಡಲು ಸುಪ್ರೀಂಕೋರ್ಟ್ ಒಪ್ಪಲ್ಲ. ನನಗೆ ಗೊತ್ತಿರುವ ಪ್ರಕಾರ ನೀಟ್ ಬೇಡ ಎಂದು ಎಷ್ಟು ರಾಜ್ಯಗಳು ಕೋರ್ಟ್ ಗೆ ಹೋಗಬಹುದು? ಆಗ ನೀಟ್ ರದ್ದತಿಯಾಗಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.