Publish Date: Wed, 11 Jan 2023 (20:15 IST)
Updated Date: Wed, 11 Jan 2023 (20:17 IST)
ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸುಗೂರು ಅವರ ಕಾರು ಡಿಕ್ಕಿಯಾಗಿ ಮರಿಯಮ್ಮ ನಾಯಕ ಎಂಬ ವೃದ್ಧೆ ಸಾವನಪ್ಪಿದ್ದಾರೆ. ಈ ಘಟನೆ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪುರ ಕ್ರಾಸ್ ಬಳಿ ನಡೆದಿದೆ. ನಿನ್ನೆ ಮೈಲಾಪುರ ಕ್ರಾಸ್ ಬಳಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಲಾಪುರ ಬಸ್ ನಿಲ್ದಾಣ ಬಳಿ ರಸ್ತೆ ದಾಟುತ್ತಿದ್ದ ವೃದ್ಧೆಗೆ ಶಾಸಕ ಬಸವರಾಜ ದಡೇಸುಗೂರು ಪ್ರಯಾಣಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ನಿಯಂತ್ರಣ ಕಳೆದುಕೊಂಡು ವೃದ್ಧೆಗೆ ಡಿಕ್ಕಿ ಹೊಡೆದಿದ್ದಾನೆ. ಗಾಯಾಳು ವೃದ್ಧೆಯನ್ನ ಕಾರಟಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ವೃದ್ಧೆ ಮರಿಯಮ್ಮಗೆ ಚಿಕಿತ್ಸೆ ಕೊಡಿಸಿ ಶಾಸಕ ದಡೇಸುಗೂರು ಅಲ್ಲಿಂದ ತೆರಳಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ವೃದ್ಧೆಯನ್ನ ಬಳ್ಳಾರಿ ವಿಮ್ಸ್ಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ವೃದ್ಧೆ ಮರಿಯಮ್ಮ ನಾಯಕ ಮೃತಪಟ್ಟಿದ್ದಾರೆ. ಮೂಲತಃ ಚಳ್ಳೂರು ಗ್ರಾಮದ ನಿವಾಸಿಯಾಗಿರುವ ಮರಿಯಮ್ಮ ಮೈಲಾಪುರ ಗ್ರಾಮದ ಮಗಳ ಮನೆಯಲ್ಲೇ ನೆಲೆಸಿದ್ದರು. ವೃದ್ಧಾಪ್ಯ ವೇತನಕ್ಕಾಗಿ ಚಳ್ಳೂರು ಗ್ರಾಮಕ್ಕೆ ತೆರಳಿದ್ದಾಗ ಘಟನೆ ನಡೆದಿದೆ. ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.