ತುಮಕೂರು: ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ಕೊಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಕುರಿತು ಇಂದು ಸಚಿವ ಸೋಮಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ.
ಇಂದು ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ಜನ್ಮ ಜಯಂತಿ ಪ್ರಯುಕ್ತ ಇಂದು ಸಿದ್ಧಗಂಗಾ ಮಠದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿ ಮಾತನಾಡಿದರು. ಈ ವೇಳೆ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡ್ತೀರಾ ಎಂದು ಮಾಧ್ಯಮಗಳು ಪ್ರಶ್ನಿಸಿವೆ.
ಭಾರತ ಸರ್ಕಾರ ಶ್ರೀ ಮಠದ ಬಗ್ಗೆ ವಿಶೇಷವಾದ ಭಕ್ತಿ ಹೊಂದಿದೆ. ಅದರಲ್ಲೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀಗಳಿದ್ದಾಗ ಮತ್ತು ಶ್ರೀಗಳು ಹೋದ ಬಳಿಕವೂ ಗದ್ದುಗೆಗೆ ಬಂದು ಆಶೀರ್ವಾದ ಪಡೆದು ಹೋಗಿದ್ದಾರೆ.
ಶ್ರೀ ಮಠದಲ್ಲಿ ಪೂಜ್ಯರು ಈಗಲೂ ಇದ್ದಾರೆ ಎಂಬ ನಂಬಿಕೆಯಿದೆ. ತಪಸ್ವಿ, ಪವಾಡ ಸದೃಶ ಸ್ವಾಮೀಜಿಗಳಿಗೆ ಭಾರತ ರತ್ನ ಕೊಡಬೇಕು ಎಂದು ಮೊದಲಿನಿಂದಲೂ ನಾವು ಮನವಿ ಮಾಡುತ್ತಲೇ ಬಂದಿದ್ದೇವೆ. ಶ್ರೀಗಳಿಗೆ ಭಾರತ ರತ್ನ ಕೊಟ್ಟರೆ ಆ ಪದವಿಗೆ ಗೌರವ ಬರುತ್ತದೆ. ಶ್ರೀಗಳು ಭಾರತ ರತ್ನ ಅಲ್ಲ, ವಿಶ್ವದ ರತ್ನ ಆಗಿದ್ದಾರೆ ಎಂದಿದ್ದಾರೆ.