Publish Date: Thu, 26 Apr 2018 (18:38 IST)
Updated Date: Thu, 26 Apr 2018 (18:49 IST)
ವಿಜಯಪುರ: ಪಂಚ ಪೀಠಾಧಿಪತಿಗಳಿಂದ ನಡೆಯುತ್ತಿದೆ ಎಗ್ಗಿಲ್ಲದೇ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದೆ. ಪಂಚ ಪೀಠಾಧಿಪತಿಗಳಿಂದ ಪಾದ ಪೂಜೆ ನೆಪದಲ್ಲಿ ಪ್ರಮಾಣ ವಚನ ಬೋಧಿಸುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮಗೂ ನಿಮಗೂ ವಿಚಾರಿಕ ಭಿನ್ನಾಭಿಪ್ರಾಯವಿದೆ ಹಾಗೆಂದ ಮಾತ್ರಕ್ಕೆ ಮತವನ್ನು ಎಂ.ಬಿ.ಪಾಟೀಲರಿಗೆ ಹಾಕಬೇಡಿ ಎಂಬುದು ಎಷ್ಟರ ಮಟ್ಟಿಗೆ ಸರಿ? ನಿಮಗೆ ತಾಕತ್ತಿದ್ದರೆ ವಿನಯ ಕುಲಕರ್ಣಿ ಮತಕ್ಷೇತ್ರಕ್ಕೆ ಹೋಗಿ ಪ್ರಚಾರ ಮಾಡಿ ಹೀಗಂತ ಸಚಿವ ಎಂ.ಬಿ.ಪಾಟೀಲ್ ಸವಾಲು ಹಾಕಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ದಾಖಲೆ ಸಮೇತ ಆಗಮಿಸಿ ಸಚಿವ ಎಂ.ಬಿ.ಪಾಟೀಲ್ ನೀತಿ ಸಂಹಿತೆ ಉಲ್ಲಂಘನೆ ಕುರಿತು ದೂರು ನೀಡಿದರು. ಬಳಿಕ ಮಾದ್ಯಮದವರ ಜತೆ ಮಾತನಾಡಿ, ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇದನ್ನು ಪಾಲನೆ ಮಾಡುವದು ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಯವರ ಮಠಾಧೀಶರ ಕರ್ತವ್ಯ.
ವಿಜಯಪುರದಲ್ಲಿ ನೀತಿ ಸಂಹಿತೆ ಜಾರಿ ಆಗುವ ಮುಂಚೆ ವೀರಶೈವ ಸಮಾವೇಶ ನಡೆದಿತ್ತು. ಆ ಸಮಾವೇಶದಲ್ಲಿ ಕೆಲ ಸ್ವಾಮಿಗಳು ಧರ್ಮದ ವಿಚಾರದಲ್ಲಿ ಎಂ.ಬಿ.ಪಾಟೀಲ್ ರಿಗೆ ಮತ ಹಾಕಬೇಡಿ ಎಂದು ಹೇಳಿಸಿದರು. ಅದೇ ಕಾರ್ಯಕ್ರಮದಲ್ಲಿ ಒಬ್ಬ ಮಹಿಳೆ ನನಗೆ ತುಂಡು ತುಂಡು ಮಾಡುತ್ತೇನೆ ಎಂದು ಹೇಳಿದಳು. ಗುಲಬರ್ಗಾ ಮೂಲದ ಬಿಜೆಪಿ ಸದಸ್ಯೆಯೇ ಆ ಕಾರ್ಯಕ್ರಮದಲ್ಲಿ ಮಾತನಾಡಿದ್ದು ಎಂದು ತಡವಾಗಿ ಗಮನಕ್ಕೆ ಬಂತು ಎಂದರು.
ಆದರೆ ಡಾ.ಮಹದೇವ ಶಿವಾಚಾರ್ಯ ಬಿಜೆಪಿ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾರೆ, ಮನಗೂಳಿ ಶಿವಾಚಾರ್ಯ ಹಿನ್ನಲೆ ಕೂಡಾ ಕೆಲ ದಿನಗಳಲ್ಲಿ ಹೊರ ತರುತ್ತೇನೆ. ಈಗ ನಾನು ಜನರ ಮುಂದೆ ಹೇಳಿದರೆ ಮನಗೂಳಿ ಸ್ವಾಮಿಜಿಗೆ ಯಾರೂ ಮನೆಯಲ್ಲಿ ಸೇರಿಸಿಕೊಳ್ಳುವದಿಲ್ಲ.
ಪಂಚ ಪೀಠಾಧಿಪತಿಗಳು ಕೆಲವರ ಮನೆಗೆ ಪಾದ ಪೂಜೆಗೆ ಹೋಗಿ ಧರ್ಮ ಒಡೆದ ಎಂ.ಬಿ.ಪಾಟೀಲರಿಗೆ ಮತ ಹಾಕಬೇಡಿ ಎನ್ನುತ್ತಾರೆ ಆ ಆಡಿಯೋ ಕೂಡಾ ನನ್ನ ಬಳಿ ಇದೆ. ಬಿಜ್ಜರಗಿಯಲ್ಲಿ ಶ್ರೀಶೈಲ ಜಗದ್ಗುರುಗಳು ಮಠದಲ್ಲಿ ಕೂಡಾ ಆಣೆ ಪ್ರಮಾಣ ಮಾಡಿಸಿದ್ದಾರೆ. ಕನಮಡಿ ಗೆ ಹೋದಾಗ ಜನ ಇದನ್ನು ತಡೆ ಹಿಡಿದಿದ್ದಾರೆ. ಶ್ರೀಶೈಲ ಹಾಗೂ ಕಾಶಿ ಜಗದ್ಗುರುಗಳಿಗೆ ಎಸ್ಕೇಪ್ ಮಾಡಿ ಕರೆದುಕೊಂಡು ಹೋಗುತ್ತಾರೆ ಎಂದು ದೂರಿದರು.