Publish Date: Sun, 11 Sep 2022 (16:31 IST)
Updated Date: Sun, 11 Sep 2022 (16:46 IST)
ಉತ್ತರಪ್ರದೇಶದ ಅಲಹಾಬಾದ್ನ ಮೊಹಮ್ಮದ್ ಆಯುಬ್ ಎಂಬವರ ಪುತ್ರ ಶಿಬು ಯಾನೆ ಮೊಹಮ್ಮದ್ ತೊಯಿಬ್ ಎಂಬ ಯುವಕ ಮಂಗಳೂರಿನ ವೈಟ್ ಡೌಸ್ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಗುಣಮುಖನಾಗಿದ್ದಾನೆ.
ಅಲಹಾಬಾದ್ನ ಶಿಬು ಶಿವಕಾಶಿಯಲ್ಲಿ ಕ್ಯಾಲೆಂಡರ್ ತಯಾರಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಸೋದರಿಗೆ ಮದುವೆ ನಿಶ್ಚಯವಾಗಿತ್ತು. ಆಕೆಯ ಮದುವೆಯ ಬಳಿಕ ಈತನಿಗೂ ಮದುವೆ ಮಾಡಲು ಯುವತಿ ನೋಡಲಾಗಿತ್ತು. ಮದುವೆಯ ತಯಾರಿಯ ಹಿನ್ನೆಲೆಯಲ್ಲಿ ಶಿಬು ತಾನು ಕೆಲಸ ಮಾಡುವ ಸಂಸ್ಥೆಯಲ್ಲಿ ರಜೆ ಮತ್ತು ದುಡಿದ ಹಣ ಕೇಳಿದ್ದ. ಆದರೆ ಸಂಸ್ಥೆ ಎರಡನ್ನೂ ನೀಡಲು ನಿರಾಕರಿಸಿತ್ತು.
ಇದರಿಂದ ದಿಗಿಲುಗೊಂಡ ಈತ ರೈಲ್ವೆ ಸ್ಟೇಷನ್ಗೆ ಹೋಗಿ ರೈಲು ಹತ್ತಿದ್ದಾನೆ. ತೀರಾ ಆತಂಕದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಅಸ್ವಸ್ಥನಾಗಿದ್ದಾನೆ. ಹೀಗೆ ರೈಲು ಹತ್ತಿ ಬಂದವನು ಮಂಗಳೂರು ತಲುಪಿದ್ದಾನೆ. ಮಂಗಳೂರು ನಗರದಲ್ಲಿ ಸುಮಾರು ನಾಲ್ಕು ದಿನಗಳಿಂದ ಮಾನಸಿಕ ಅಸ್ವಸ್ಥನಾಗಿ ಬೀದಿ ಬೀದಿ ಅಳೆಯುತ್ತಿದ್ದ ಈತನನ್ನು 2019 ಮೇ ತಿಂಗಳಲ್ಲಿ ನಿರ್ಗತಿಕರಿಗೆ ನೆರವಾಗುವ ನಗರದ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರು ಗಮನಿಸಿ ತಮ್ಮ ಸಂಸ್ಥೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದ್ದಾರೆ.