ಮಾಧ್ಯಮಗಳು ನನ್ನ ತೇಜೊವಧೆ ಮಾಡುತ್ತಿವೆ. ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೋಲಾರ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಗಂಭೀರವಾಗಿ ಆರೋಪಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್, ರಾಜ್ಯಸಭೆ ಚುನಾವಣೆಗೆ ಮತ ಚಲಾಯಿಸಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಆರೋಪ ಗಂಭೀರವಾದದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ ಎಂದು ಆವಾಗಲೇ ಹೇಳಿದ್ದೇನೆ. ಕೆಲವು ಖಾಸಗಿ ಸುದ್ದಿ ವಾಹಿನಿಗಳು ಪ್ರಚಾರಕ್ಕಾಗಿ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ಯಾವ ರೆಸಾರ್ಟ್ ರಾಜಕಾರಣಕ್ಕೂ ತೆರಳಿಲ್ಲ. ನಾನು ನನ್ನ ಸ್ವಕ್ಷೇತ್ರದಲ್ಲೆ ಇದ್ದೇನೆ. ಚುನಾವಣೆಗೆ ಬೆಂಬಲಿಸಿ ಎಂದು ಯಾರೂ ನನಗೆ ಆಮಿಷ ಒಡ್ಡಿಲ್ಲ ಎಂದು ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ