Publish Date: Wed, 06 Sep 2017 (15:33 IST)
Updated Date: Wed, 06 Sep 2017 (15:38 IST)
ಕಲಬುರ್ಗಿ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಘೋರ ಅನ್ಯಾಯ. ವಿಚಾರವಾದ, ವೈಚಾರಿಕವನ್ನು ಸಹಿಸಿಕೊಳ್ಳದಿರುವುದು ಶೋಚನೀಯ ಸಂಗತಿ. ನೇರ, ದಿಟ್ಟ, ನಿಸ್ವಾರ್ಥವಿರುವ ಇಂತಹ ವ್ಯಕ್ತಿಗಳ ಬಗ್ಗೆ ವಿರೋಧಿ ಮನೋಭಾವ ಹೊಂದಿರುವುದು ಖಂಡನೀಯ ಎಂದು ಮಾತೆ ಮಹಾದೇವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರಿಗಿಂತ ಎತ್ತರದಲ್ಲಿ ಕೂರುತ್ತಿದ್ದ ಪಂಚಾಚಾರ್ಯರಿಗೆ ಈಗ ದುರಂಹಕಾರ ಕಡಿಮೆಯಾಗಿದೆ. ಶಿವಯೋಗ ಮಂದಿರ ಸಮಾವೇಶದಲ್ಲಿ ಎಲ್ಲರ ಸಮನಾಗಿ ಕುಳಿತು ಸೌಜನ್ಯ ತೋರಿದಕ್ಕೆ ಸಂತಸವಾಗಿದೆ. ಮಾನವನ ಹೆಗಲಮೇಲೆ ಅಡ್ಡಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದಿರಲು ನಿರ್ಧರಿಸಿರುವ ಪಂಚಾಚಾರ್ಯರ ನಿರ್ಣಯಕ್ಕೆ ಸ್ವಾಗತ. ಆದರೆ ವಿರಕ್ತರು ಪಂಚಾಚಾರ್ಯರೊಂದಿಗೆ ಸೇರಬಾರದು. ಆದರೆ ತತ್ವ ಭ್ರಷ್ಟತೆಯಿಂದ ಪಂಚಾಚಾರ್ಯದೊಂದಿಗೆ ಸೇರಿದ್ದಾರೆ ಎಂದು ಹೇಳಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆಯಲ್ಲಿ ಯಾವುದೇ ರಾಜಕೀಯ ಕೈವಾಡ ಇಲ್ಲ. ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಯೂ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ನಡೆದಿರುವ ಹೋರಾಟದಲ್ಲಿ ಭಾಗವಹಿಸಿ ಅವರೂ ಲಾಭ ಪಡೆಯಲಿ. ಸೆಪ್ಟೆಂಬರ್ 10 ರಂದು ನಡೆಯಬೇಕಿದ್ದ ಕಲಬುರ್ಗಿ ಚಲೋ ಸೆ. 24ಕ್ಕೆ ಮುಂದೂಡಲಾಗಿದೆ. ಸುಮಾರು 3 ಲಕ್ಷ ಜನ ಸೇರಿಸುವ ನಿರೀಕ್ಷೆಯಿದ್ದು, ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹೋರಾಟ ಚುರುಕುಗೊಳಿಸುವುದಾಗಿ ಹೇಳಿದರು.