Publish Date: Fri, 22 Sep 2017 (19:50 IST)
Updated Date: Fri, 22 Sep 2017 (19:53 IST)
ಬೆಂಗಳೂರು: 2018ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡೆಸಿದೆ. ಈ ನಿಟ್ಟಿನಲ್ಲಿ ನಾಳೆಯಿಂದ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಾರತ್ತಹಳ್ಳಿ ಸಮೀಪದ ರಾಮಗೊಂಡನಹಳ್ಳಿ ಶಾಲಾ ಮೈದಾನದಲ್ಲಿ ನಾಳೆ "ಮನೆ ಮನೆಗೆ ಕಾಂಗ್ರೆಸ್" ಕಾರ್ಯಕ್ರಮ ಆಯೋಜಿಸಲಾಗಿದ್ದು, ಪರಮೇಶ್ವರ್ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಬಳಿಕ ಮಾತನಾಡಿದ ಅವರು, ನಾಳೆ 11ಗಂಟೆಗೆ ಕೆಪಿಸಿಸಿ ವತಿಯಿಂದ ಮಹದೇವಪುರ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಆರಂಭವಾಗಲಿದೆ. ನಾಳೆ 224 ಕ್ಷೇತ್ರದಲ್ಲೂ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಚಾಲನೆ ನೀಡಲಿದ್ದಾರೆ. ಸಚಿವರಾದ ಎಸ್.ಆರ್.ಪಾಟೀಲ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ಸೇರಿದಂತೆ ಹಲವು ಸಚಿವರು ಮತ್ತು ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಬಾರಿಗೆ ರಾಜ್ಯದಲ್ಲಿ 54ಸಾವಿರದ 501 ಬೂತ್ ಗಳನ್ನು ಮಾಡಿದ್ದೇವೆ. 6.5 ಲಕ್ಷ ಸದಸ್ಯರನ್ನು ನೇಮಿಸಿದ್ದೇವೆ. ಸರ್ಕಾರದ ಕಾರ್ಯಕ್ರಮಗಳನ್ನು ಕಿರು ಹೊತ್ತಿಗೆ ಮೂಲಕ ಬೂತ್ ಸದಸ್ಯರು ಮನೆಮನೆಗೆ ತಲುಪಿಸಲಿದ್ದಾರೆ. ನಾಳೆಯಿಂದ ಅ. 15ರವರೆಗೆ ಸದಸ್ಯರು ಮನೆಮನೆಗೆ ಭೇಟಿ ನೀಡಲಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಕೆಲಸಗಳ ಬಗ್ಗೆಯೂ ಸದಸ್ಯರು ಮನೆಮನೆಗೆ ತೆರಳಿ ಮಾಹಿತಿ ನೀಡ್ತಾರೆ. ಮುಂದೆ ಜನರೇ ತೀರ್ಮಾನಿಸಲಿ ಎಂದರು.
ನಾನು ಮಹದೇವಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ತೀನಿ ಅಂತ ಬಹಳ ಜನ ಅಂದುಕೊಂಡಿದ್ದಾರೆ. ನಾನು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲ್ಲ. ಇಲ್ಲಿ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದನ್ನ ಎಐಸಿಸಿ ಮುಖಂಡರು ತೀರ್ಮಾನ ಮಾಡ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕೇವಲ 5ಸಾವಿರ ಮತದಲ್ಲಿ ಶ್ರೀನಿವಾಸ್ ಸೋತಿದ್ರು. ಹೆಚ್ಚಿನ ಅಂಶ ಅವರಿಗೆ ಟಿಕೆಟ್ ಸಿಗುತ್ತೆ. ಆದ್ರೆ, ಇದನ್ನು ಸೋನಿಯಾ ಗಾಂಧಿ ನಿರ್ಧರಿಸುತ್ತಾರೆ. ನಾಳಿನ ಕಾರ್ಯಕ್ರಮದಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಎಸಚ್ಚರಿಕೆ ವಹಿಸಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಈಗಾಗ್ಲೆ ರಣಕಹಳೆ ಊದಿದೆ. ಬಿಜೆಪಿಯವರು ಭಯ ಬಿದ್ದಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳನ್ನು ನಾಳೆಯಿಂದ ಜನರಿಗೆ ತಲುಪಿಸಲಿದ್ದೇವೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಯಡಿಯೂರಪ್ಪ ಕೇಸ್ ನಲ್ಲಿ ನ್ಯಾಯಾಲಯ ಯಾಕೆ ತಡೆಯಾಜ್ಞೆ ಕೊಟ್ಟಿದೆ ಗೊತ್ತಿಲ್ಲ.ಆದರೆ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿದೆ. ಎಸಿಬಿ ಆ ದಿಶೆಯಲ್ಲಿ ಮುಂದುವರಿಯುತ್ತದೆ ಎಂದರು.