ಚಾಮರಾಜನಗರ: ಇಲ್ಲಿನ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಐದು ಹುಲಿಗಳ ಸಾವನ್ನಪ್ಪಿದ ಘಟನೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಹುಲಿಗಳಿಗೆ ವಿಷ ಪ್ರಾಷನ ಮಾಡಿಸಿರುವುದು ಖಚಿತವಾಗಿತ್ತು. ಬಳಿಕ ಅಂಗಾಂಗ ಪರೀಕ್ಷೆಗೂ ರವಾನಿಸಲಾಗಿತ್ತು.
ಇದೀಗ ಹುಲಿಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಮಸ್ಥರನ್ನು ಬಂಧಿಸಲಾಗಿದೆ. ಬಂಧಿತರನ್ನು ಮಾದುರಾಜ್ ಮತ್ತು ನಾಗರಾಜ್ ಎಂದು ಗುರುತಿಸಲಾಗಿದೆ. ಮಾದುರಾಜ್ ಗೆ ಸೇರಿದ ಹಸುಗಳನ್ನು ಹುಲಿ ತಿಂದು ಹಾಕಿತ್ತು. ಇದನ್ನು ನಾಗರಾಜ್ ಬಳಿ ಆತ ಹೇಳಿಕೊಂಡಿದ್ದ.
ಹೀಗಾಗಿ ಇಬ್ಬರೂ ಕ್ರಿಮಿನಾಶಕ ಬಳಸಿ ಹುಲಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದರು. ಅದರಂತೆ ನಾಗರಾಜ್ ಮೃತ ಹಸುವಿಗೆ ವಿಷ ಲೇಪಿಸಿ ಬಂದಿದ್ದ. ಮರುದಿನ ವಿಷಪೂರಿತ ಹಸುವನ್ನು ತಿಂದು ಹುಲಿಗಳು ಸಾವನ್ನಪ್ಪಿವೆ. ಇದೀಗ ವಿಚಾರಣೆ ವೇಳೆ ಆರೋಪಿಗಳು ಸತ್ಯ ಬಾಯ್ಬಿಟ್ಟಿದ್ದಾರೆ.