Publish Date: Sun, 12 Aug 2018 (16:53 IST)
Updated Date: Sun, 12 Aug 2018 (16:55 IST)
ಉತ್ತರ ಕರ್ನಾಟಕ ಜನ್ರು ತೆರೆದ ಕೊಳವೆ ಬಾವಿ ಅಂದ್ರೆ ಸಾಕು ಗಢ-ಗಢ ಅಂತ ನಡುಗ್ತಾರೆ. ಯಾಕಂದ್ರೆ ತೆರೆದ ಕೊಳವೆ ಬಾವಿಗೆ ಬೀಳುವ ಮುಗ್ದ ಮಕ್ಕಳ ಸಂಖ್ಯೆ ಉತ್ತರ ಕರ್ನಾಟಕದಲ್ಲೆ ಜಾಸ್ತಿ.
ಇಂಥ ಸನ್ನಿವೇಶದಲ್ಲಿ ಗದಗ ಜಿಲ್ಲೆಯಲ್ಲಿ ಒಳಚರಂಡಿ ಕಾಮಗಾರಿ ವೇಳೆ ಪುರಾತನ ಬಾವಿಯೊಂದು ಪತ್ತೆಯಾಗಿದೆ. ಆದ್ರೆ ನಡು ರಸ್ತೆಯ ಬಾವಿ ಮುಚ್ಚದೇ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಹೀಗಾಗಿ ಆ ಪಟ್ಟಣದ ಜನ್ರು ಭಯದಲ್ಲಿ ಕಾಲಕಳೆಯುತ್ತಿದ್ದಾರೆ.
ಕಾಮಗಾರಿ ಪ್ರಾರಂಭದಲ್ಲಿ ಗುತ್ತಿಗೆದಾರನಿಗೆ ಪುರಾತನ ಕಾಲದ ಬಾವಿ ಸಿಕ್ಕಿದೆ. ಆ ಬಾವಿ ನೋಡುತ್ತಿದಂತೆ ಕಾಮಗಾರಿಯನ್ನು ಹಾಗೆ ಬಿಟ್ಟು ಓಡಿ ಹೋಗಿದ್ದಾನೆ ಗುತ್ತಿಗೆದಾರ. ತೆರೆದ ಬಾವಿ ನೋಡಿ ಪಟ್ಟಣದ ಜನರು ಕಂಗಾಲಾಗುವಂತೆ ಆಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪೇಠಬಣದ ಕಾಲೋನಿಯಲ್ಲಿ ಈ ಚಿತ್ರಣ ಕಂಡುಬರುತ್ತಿದೆ. ಈ ಬಡಾವಣೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ನಡೆದಿದೆ. ಈ ವೇಳೆ ಜೆಸಿಬಿಯಿಂದ ಗುಂಡಿ ತೋಡುತ್ತಿದ್ದಾಗ ಬಂಡೆಗಲ್ಲು ಕಾಣಿಸಿದೆ. ಆ ಬಂಡೆಕಲ್ಲನ್ನು ತೆಗೆದಾಗ ಸುಮಾರು ನೂರಾರು ಅಡಿ ಆಳದ ಹಳೇ ಬಾವಿ ಪತ್ತೆಯಾಗಿದೆ. ಈ ವೇಳೆ ಬಾವಿ ಮುಚ್ಚದೇ ಜೆಸಿಬಿ ಚಾಲಕ ಅರ್ಧಕ್ಕೆ ಬಿಟ್ಟು ಓಡಿ ಹೋಗಿದ್ದಾರೆ. ಅಪಾಯಕಾರಿ ಬಾವಿ ತೆರೆದು ಎರಡು ದಿನಗಳಾದ್ರೂ ಮುಚ್ಚುವ ಗೋಜಿಗೆ ಹೋಗಿಲ್ಲ. ಇದು ಆ ಬಡಾವಣೆ ಜನ್ರ ಆತಂಕಕ್ಕೆ ಕಾರಣವಾಗಿದೆ.