Publish Date: Fri, 09 Aug 2019 (14:41 IST)
Updated Date: Fri, 09 Aug 2019 (14:43 IST)
ಬೆಂಗಳೂರು : ರಾಜ್ಯದೆಲ್ಲೆಡೆ ಸುರಿಯುತ್ತಿರುವ ಮಹಾಮಳೆಗೆ ಕೆಲವಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪ್ರವಾಹ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.
ಇಂದು ನೆರೆ ಪೀಡಿತ ಮುಧೋಳ, ಜಮಖಂಡಿ, ಕೂಡಲಸಂಗಮ ಹಾಗೂ ಬಾದಾಮಿಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ಸಿಎಂ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಳೆಯಿಂದಾಗಿ ರಾಜ್ಯದಲ್ಲಿ ವಿಪರೀತ ನಷ್ಟ ಉಂಟಾಗಿದೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುವ ಭರವಸೆ ನೀಡಿದೆ. ಈ ಕುರಿತು ಕೇಂದ್ರದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ, ಈಗಾಗಲೇ ಕೇಂದ್ರ ಸರ್ಕಾರ ನೆರೆ ಪರಿಹಾರಕ್ಕೆ 100 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಎಂದು ಹೇಳಿದ್ದಾರೆ.
ಹಾಗೇ ನೆರೆ ಪರಿಹಾರಕ್ಕಾಗಿ ಇನ್ಫೋಸಿಸ್ ನಿಂದ ಸುಧಾಮೂರ್ತಿ 10 ಕೋಟಿ, ಮಾಜಿ ಸಚಿವ ಮುರುಗೇಶ್ ನಿರಾಣಿ ಹಾಗೂ ಕೆಎಂಎಫ್ ತಲಾ 1 ಕೋಟಿ ಹಣ ನೀಡಿದ್ದಾರೆ. ಇನ್ನೂ, ನೆರೆ ನಿರಾಶ್ರಿತರಿಗಾಗಿ ಜನಸಾಮಾನ್ಯರು ಸಂಘ-ಸಂಸ್ಥೆ ಉದ್ದಿಮೆದಾರರು ಸಹಾಯಹಸ್ತ ಚಾಚಬೇಕು, ಸಿಎಂ ಪರಿಹಾರ ನಿಧಿಗೆ ಹಣ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.