Publish Date: Thu, 16 Jan 2025 (10:07 IST)
Updated Date: Thu, 16 Jan 2025 (10:09 IST)
ಬೆಳಗಾವಿ: ಮಹಿಳಾ ಮತ್ತು ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತದ ಘಟನೆಗೆ ಈಗ ಟ್ವಿಸ್ಟ್ ಸಿಕ್ಕಿದೆ. ಸಚಿವೆಯ ಕಾರು ಅಪಘಾತದ ಕಾರಣವೇ ಬೇರೆ ಎಂಬುದು ಈಗ ಬಯಲಾಗಿದೆ.
ಸಂಕ್ರಾಂತಿ ದಿನದಂದು ಬೆಳ್ಳಂ ಬೆಳಿಗ್ಗೆ ತಮ್ಮ ಸಹೋದರನ ಜೊತೆ ಬೆಳಗಾವಿ ನಿವಾಸಕ್ಕೆ ತೆರಳುವಾಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದ್ದ ಕಾರು ಮರಕ್ಕೆ ಢಿಕ್ಕಿಯಾಗಿ ಸಚಿವೆ ಗಾಯಗೊಂಡಿದ್ದರು. ಸದ್ಯಕ್ಕೆ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಚಿವೆಯ ಕಾರಿಗೆ ಎರಡು ನಾಯಿಗಳು ಅಡ್ಡಬಂದಿದ್ದರಿಂದ ಅದರಿಂದ ತಪ್ಪಿಸಿಕೊಳ್ಳಲು ಹೋಗಿ ಮರಕ್ಕೆ ಢಿಕ್ಕಿಯಾಯಿತು ಎಂದು ಸಚಿವರ ಸಹೋದರ ಎಂಎಲ್ ಸಿ ಚನ್ನರಾಜು ಹೇಳಿಕೆ ನೀಡಿದ್ದರು.
ಆದರೆ ಈಗ ಪೊಲೀಸರು ಕಾರು ಚಾಲಕನ ವಿಚಾರಣೆ ನಡೆಸಿದ್ದು ಅಪಘಾತದ ಹಿಂದಿನ ಕಾರಣದ ರಹಸ್ಯ ಬಯಲಾಗಿದೆ. ಸಚಿವೆಯ ಕಾರಿಗೆ ನಾಯಿಗಳಲ್ಲ. ಟ್ಯಾಂಕರ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಢಿಕ್ಕಿಯಾಗಿದೆ ಎನ್ನಲಾಗುತ್ತಿದೆ.
ಪೊಲೀಸರ ಮುಂದೆ ಹೇಳಿಕೆ ನೀಡಿರುವ ಚಾಲಕ ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ಯಾಂಕರ್ ನಿಂದ ತಪ್ಪಿಸಿಕೊಳ್ಳಲು ಹೋಗಿ ಪಕ್ಕದಲ್ಲಿದ್ದ ಸರ್ವಿಸ್ ರಸ್ತೆಗೆ ಕಾರು ನುಗ್ಗಿತು. ಬಳಿಕ ಮರಕ್ಕೆ ಢಿಕ್ಕಿಯಾಯಿತು ಎಂದು ಹೇಳಿಕೆ ನೀಡಿದ್ದಾರೆ. ಢಿಕ್ಕಿಯಾಗಲಿದ್ದು ಟ್ಯಾಂಕರ್ ಡ್ರೈವರ್ ಒಮ್ಮೆ ನಿಂತು ನೋಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಹೀಗಾಗಿ ಈಗ ಟ್ಯಾಂಕರ್ ಮಾಲಿಕನಿಗಾಗಿ ಹುಡುಕಾಟ ನಡೆದಿದೆ. ಪೊಲೀಸರು ಹಿಟ್ ಆಂಡ್ ರನ್ ಕೇಸ್ ದಾಖಲಿಸಿದ್ದಾರೆ.