Publish Date: Wed, 04 Dec 2024 (11:11 IST)
Updated Date: Wed, 04 Dec 2024 (11:18 IST)
ಬೆಂಗಳೂರು: ಕೆಎಸ್ ಆರ್ ಟಿಸಿಯ ಎಲ್ಲಾ ಬಸ್ ಗಳಲ್ಲಿ ಇನ್ನು ಮುಂದೆ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು ಇನ್ನು ಮುಂದೆ ಚಿಲ್ಲರೆಗಾಗಿ ಕಂಡಕ್ಟರ್ ಜೊತೆ ಕಿತ್ತಾಟವಾಡಬೇಕಿಲ್ಲ.
ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಕಡೆ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಚಿಲ್ಲರೆಗಾಗಿ ಜನ ಪರದಾಡುವಂತಾಗಿದೆ. ಬಸ್ ಗಳಲ್ಲೂ ಚಿಲ್ಲರೆ ನೀಡದೇ ಪ್ರಯಾಣಿಕರಿಂದ ಕಂಡಕ್ಟರ್ ಗಳಿಗೂ ಸಮಸ್ಯೆಯಾಗುತ್ತಿದೆ. ಈ ಕಾರಣಕ್ಕೆ ಈಗ ಕಂಡಕ್ಟರ್ ಗಳಿಗೆ ಇಟಿಎಂ ಮೆಷಿನ್ ಗಳನ್ನು ನೀಡಲಾಗಿದ್ದು, ಇನ್ನು ಮುಂದೆ ಎಲ್ಲಾ ಬಸ್ ಗಳಲ್ಲಿ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೆ ಬರಲಿದೆ.
ಈಗಾಗಲೇ 9 ಸಾವಿರ ಬಸ್ ಗಳಿಗೆ ಈ ಯಂತ್ರಗಳನ್ನು ನೀಡಲಾಗಿದೆ ಎಂದು ಕೆಎಸ್ ಆರ್ ಟಿಸಿ ತಿಳಿಸಿದೆ. ಪ್ರಾಯೋಗಿಕವಾಗಿ ಕಳೆದ ತಿಂಗಳೇ ಕೆಲವು ತಿಂಗಳಿನಿಂದ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿತ್ತು. ಈಗ ಎಲ್ಲಾ ಬಸ್ ಗಳಿಗೂ ಈ ವ್ಯವಸ್ಥೆ ವಿಸ್ತರಣೆಯಾಗಲಿದೆ ಎಂದು ಕೆಎಸ್ ಆರ್ ಟಿಸಿ ಮೂಲಗಳು ಹೇಳಿವೆ.
ಕ್ಯೂ ಆರ್ ಕೋಡ್ ವ್ಯವಸ್ಥೆಯಿಂದ ಸಾಕಷ್ಟು ಉಪಯೋಗವಾಗಿದೆ. ಸಂಸ್ಥೆಯ ಆದಾಯವೂ ಹೆಚ್ಚಿದೆ. ಡೈನಾಮಿಕ್ ಕ್ಯೂ ಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿರುವುದು ಕರ್ನಾಟಕದಲ್ಲೇ ಮೊದಲು. ಹೀಗಾಗಿ ಇದು ರಾಜ್ಯಕ್ಕೆ ಹೆಗ್ಗಳಿಕೆಯ ವಿಚಾರವೂ ಆಗಿದೆ.