Publish Date: Sun, 23 Jan 2022 (20:58 IST)
Updated Date: Sun, 23 Jan 2022 (21:08 IST)
ಕೇರಳದಲ್ಲಿ ಕೊರೋನಾ ಮೂರನೇ ಅಲೆ ಉತ್ತುಂಗಕ್ಕೆ ಏರಿದ್ದು, ಆಸ್ಪತ್ರೆಯ ಐಸಿಯು ನಲ್ಲಿ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಕೊರೋನಾ ಹೊರತಾಗಿ ಇತರೆ ಆರೋಗ್ಯ ಸಮಸ್ಯೆಗಳಿಂದ ತೀರ್ವ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಕಷ್ಟಕರವಾಗಿದೆ.
ಹೃದಯ, ಕ್ಯಾನ್ಸರ್, ಯಕೃತ್ತು ಮತ್ತು ಮೂತ್ರಪಿಂಡದ ತೊಂದರೆಗಳನ್ನು ಒಳಗೊಂಡಂತೆ ಕೊಮೊರ್ಬಿಡಿಟಿ ಸಮಸ್ಯೆಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ವರದಿ ಪ್ರಕಾರ, 2.23 ಲಕ್ಷ ಸಕ್ರಿಯ ಸೋಂಕಿತರಿದ್ದು ಅವರಲ್ಲಿ ಶೇ. 3ರಷ್ಟು ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಿಲ್ಗಲೆಗಳ ಅನುಸಾರ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಮೌಲ್ಯಮಾಪನ ಮಾಡಲು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಇತ್ತೀಚೆಗಷ್ಟೆ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಾಜಿ ಸಿಎಂ ವಿ.ಎಸ್. ಅಚ್ಯುತಾನಂದನ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ತಿರುವನಂತಪುರದ ಕೇಂದ್ರ ಕಾರಾಗೃಹದಲ್ಲಿರುವ 239 ಕೈದಿಗಳಿಗೆ ಕೊರೋನಾ ದೃಢಪಟ್ಟಿದೆ. ಸೋಂಕಿತರನ್ನು ಪ್ರತ್ಯೇಕ ವಾರ್ಡ್ ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲಿನ ಔದ್ಯಕೀಯ ತಂಡ ಮಾಹಿತಿ ನೀಡಿದೆ.