Publish Date: Tue, 24 Sep 2024 (12:29 IST)
Updated Date: Tue, 24 Sep 2024 (12:32 IST)
ಬೆಂಗಳೂರು: ರಾಜ್ಯದ ಉಪನೋಂದಣಿ ಕಚೇರಿ ವಿಚಾರದಲ್ಲಿ ಮಹತ್ವದ ಬದಲಾವಣೆಯೊಂದು ಆಗಿದ್ದು, ಇದರಿಂದ ನೌಕರ ವರ್ಗದವರಿಗೆ ದೊಡ್ಡ ಉಪಕಾರವಾದಂತಾಗಲಿದೆ. ಅದೇನು ಇಲ್ಲಿದೆ ವಿವರ.
ಇದುವರೆಗೆ ಸರ್ಕಾರೀ ಕಚೇರಿಯಾಗಿರುವ ಉಪನೋಂದಣಿ ಕಚೇರಿಗಳು ಪ್ರತೀ ಭಾನುವಾರ ಮತ್ತು ಎರಡನೇ, ನಾಲ್ಕನೇ ಶನಿವಾರಗಳಂದು ಇತರೆ ಸರ್ಕಾರೀ ಕಚೇರಿಯಂತೆ ರಜಾ ದಿನವಾಗಿರುತ್ತಿತ್ತು. ಆದರೆ ಇದರಿಂದ ಉದ್ಯೋಗಸ್ಥರಿಗೆ ತಮ್ಮ ಕೆಲಸ ಮಾಡಿಕೊಳ್ಳಲು ತೊಂದರೆಯಾಗುತ್ತಿತ್ತು.
ಹೀಗಾಗಿ ಈಗ ಉಪನೋಂದಣಿ ಕಚೇರಿಯನ್ನು ಶನಿವಾರ ಮತ್ತು ಭಾನುವಾರವೂ ತೆರೆದಿಡಲು ತೀರ್ಮಾನಿಸಲಾಗಿದೆ. ಭಾನುವಾರಗಳಂದೂ ರಾಜ್ಯದ ಎಲ್ಲಾ 35 ಉಪನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ನೌಕರ ವರ್ಗದವರಿಂದ ಈ ಬಗ್ಗೆ ಬಹುದಿನಗಳಿಂದ ಬೇಡಿಕೆ ಕೇಳಿಬರುತ್ತಲೇ ಇತ್ತು.
ಉದ್ಯೋಗಸ್ಥರಿಗೆ ಉಪನೋಂದಣಿ ಕಚೇರಿಗೆ ತಮ್ಮ ಕೆಲಸ ಮಾಡಿಸಿಕೊಳ್ಳಲು ಒಂದು ದಿನ ಕಚೇರಿಗೆ ರಜೆ ಹಾಕುವ ಪರಿಸ್ಥಿತಿಯಿತ್ತು. ಆದರೆ ಈಗ ವಾರದ ಎಲ್ಲಾ ದಿನಗಳೂ ಕಚೇರಿ ತೆರೆದಿರಲಿದೆ. ಜೊತೆಗೆ ಭಾನುವಾರ ಅಥವಾ ಶನಿವಾರ ಕೆಲಸ ಮಾಡಿದ ಅಧಿಕಾರಿಗಳಿಗೆ ಮಂಗಳವಾರದಂದು ವಾರದ ರಜೆ ಸಿಗಲಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.