Publish Date: Fri, 26 Apr 2024 (09:49 IST)
Updated Date: Fri, 26 Apr 2024 (09:52 IST)
ಬೆಂಗಳೂರು: ಇಂದು ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಪಂದ್ಯಗಳು ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. ತಪ್ಪದೇ ನಿಮ್ಮ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ.
ಮತದಾನ ಮಾಡುವುದು ಅತ್ಯಂತ ಶ್ರೇಷ್ಠ ಕೆಲಸವಾಗಿದೆ. ನಾನೊಬ್ಬ ಮತದಾನ ಮಾಡದೇ ಇದ್ದರೂ ಏನು ವ್ಯತ್ಯಾಸವಾಗಲ್ಲ ಎಂಬ ಉಡಾಫೆ ಮನೋಭಾವ ಬೇಡ. ಮುಂದೆ ಆಯ್ಕೆಯಾಗಿ ಬರುವ ನಾಯಕರನ್ನು ಪ್ರಶ್ನಿಸಲು ಹಕ್ಕು ಇರಬೇಕೆಂದರೆ ಇಂದು ನಾವು ಮತ ಚಲಾಯಿಸಿದರೆ ಮಾತ್ರ ಸಾಧ್ಯ.
ಮತದಾನ ಮಾಡುವಾಗ ಕೆಲವೊಂದು ವಿಚಾರಗಳು ನಮ್ಮ ತಲೆಯಲ್ಲಿರಬೇಕು. ಒಬ್ಬರಿಗೆ ಒಮ್ಮೆ ಮಾತ್ರ ಮತದಾನ ಮಾಡಲು ಅವಕಾಶವಿದೆ. ಎರಡೆರಡು ಕಡೆ ತಪ್ಪಾಗಿ ಹೆಸರಿದೆ ಎಂದು ಕದ್ದುಮುಚ್ಚಿ ಎರಡು ಕಡೆ ವೋಟ್ ಮಾಡಲು ಹೋಗಬೇಡಿ. ಒಮ್ಮೆ ವೋಟ್ ಮಾಡಿದ ಮೇಲೆ ಕೈ ಬೆರಳ ಮೇಲೆ ಹಾಕಿದ ಷಾಯಿಯನ್ನು ಅಳಿಸಿ ಮತ್ತೊಮ್ಮೆ ಹಾಕುವ ದುಸ್ಸಾಹಸಕ್ಕೆ ಹೋಗಬೇಡಿ. ಇದು ಶಿಕ್ಷಾರ್ಹ ಅಪರಾಧವಾಗಿದೆ.
ಮತದಾನ ಮಾಡಲು ಬಂದ ಮೇಲೆ ಮತಗಟ್ಟೆಯಲ್ಲಿ ಯಾವುದೇ ಪಕ್ಷದ ಪರ ಪ್ರಚಾರ ಮಾಡುವಂತಿಲ್ಲ. ಮತ್ತು ಮತದಾನ ಮಾಡಿದ ಮೇಲೆ ಮತಗಟ್ಟೆಯಲ್ಲಿ ನಾನು ಯಾವ ಪಕ್ಷಕ್ಕೆ ಮತ ಹಾಕಿದ್ದೇನೆ ಎಂದು ಘಂಟಾಘೋಷವಾಗಿ ಹೇಳಿಕೊಳ್ಳಬೇಡಿ. ಮತದಾನ ಮಾಡುವಾಗ ಗೌಪ್ಯತೆ ಕಾಪಾಡುವುದು ಮುಖ್ಯ. ಹೀಗಾಗಿ ನಿಮ್ಮ ಮತ ಚಲಾವಣೆಯನ್ನು ಯಾರಿಗೂ ತೋರಿಸುವಂತಿಲ್ಲ. ಮತದಾನ ಮಾಡಲು ಹೋಗುವಾಗ ಗುರುತಿನ ಚೀಟಿಯನ್ನು ಮರೆಯದೇ ತೆಗೆದುಕೊಂಡು ಹೋಗಿ. ನಿಮ್ಮ ಮತವನ್ನು ಇನ್ನೊಬ್ಬರಿಗೆ ಹಾಕಲು ಹೇಳುವಂತಿಲ್ಲ. ಇವಿಷ್ಟನ್ನೂ ತಲೆಯಲ್ಲಿಟ್ಟುಕೊಂಡು ತಪ್ಪದೇ ಮತದಾನ ಮಾಡಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ.