ಬೆಂಗಳೂರು: ಈ ಬಾರಿ ಚಳಿಗಾಲದಲ್ಲಿ ಭಯಂಕರ ಚಳಿ, ಮಳೆಗಾಲದಲ್ಲಿ ಭಾರೀ ಮಳೆಯಿತ್ತು. ಬೇಸಿಗೆ ಕಾಲ ಹೇಗಿರಲಿದೆ? ಹವಾಮಾನ ತಜ್ಞರು ಏನು ಹೇಳುತ್ತಾರೆ ನೋಡಿ.
ಈ ವರ್ಷ ಎಲ್ಲವೂ ಅತೀ ಎನಿಸುವಂತಿತ್ತು. ಮಳೆಗಾಲ ಅಬ್ಬರವೂ ಜೋರಾಗಿಯೇ ಇತ್ತು. ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ದಾಖಲೆಯ ಭಾರೀ ಮಳೆಯಾಗಿತ್ತು. ಅಕ್ಟೋಬರ್ ವರೆಗೂ ಧಾರಾಕಾರ ಮಳೆ ಕಂಡುಬಂದಿತ್ತು.
ಚಳಿಗಾಲವೂ ಕೆಲವು ಜಿಲ್ಲೆಗಳಲ್ಲಿ ದಾಖಲೆಯ ಮಟ್ಟಕ್ಕೆ ತಾಪಮಾನ ಕುಸಿತ ಕಂಡುಬಂದಿತ್ತು. ಈ ಬಾರಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲೂ ವಿಪರೀತ ಎನಿಸುವಷ್ಟು ಚಳಿಯಿತ್ತು. ಆದರೆ ಚಳಿಗಾಲ ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ.
ಈ ಬಾರಿ ಬೇಸಿಗೆಯೂ ವಿಪರೀತ ಎನಿಸುವಷ್ಟು ಸುಡಲಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಫೆಬ್ರವರಿಯಿಂದಲೇ ಹಗಲು ವಿಪರೀತ ಬಿಸಿಲು ಕಂಡುಬರಲಿದೆ. ಚಳಿಗಾಲ ತೀವ್ರವಾಗಿದ್ದರಿಂದ ಬೇಸಿಗೆಯೂ ಈ ಬಾರಿ ತೀವ್ರವಾಗಿರಲಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಕಳೆದ ಬಾರಿಗಿಂತಲೂ ಈ ಬಾರಿ ಸೂರ್ಯನ ಶಾಖ ಹೆಚ್ಚು ಮೈಸುಡಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.