ಬೆಂಗಳೂರು: ಸತತ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಜನತೆಗೆ ಇಂದು ಮಳೆಯ ಆಗಮನ ಖುಷಿಕೊಟ್ಟಿದೆ. ಹವಾಮಾನ ವರದಿಗಳು ನಿಜವಾಗಿದ್ದು ಸಂಜೆ ವೇಳೆಗೆ ಕೆಲವೆಡೆ ಹನಿ ಮಳೆಯಾಗಿದೆ.
ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ವರದಿ ನೀಡಿತ್ತು. ಆದರೆ ಇಂದು ಮಧ್ಯಾಹ್ನದವರೆಗೂ ಕಡು ಬಿಸಿಲು ನೋಡಿ ಜನ ಬೇಸರಿಸಿಕೊಂಡಿದ್ದರು. ಆದರೆ ಇದೀಗ ಹವಾಮಾನ ವರದಿಗಳು ಸುಳ್ಳಾಗಿಲ್ಲ.
ಬಹುತೇಕ ಬೆಂಗಳೂರಿನಲ್ಲಿ ಇದೀಗ ದಟ್ಟ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹನಿ ಮಳೆಯಾಗಿದೆ. ಕೆಆರ್ ಪುರಂ, ಹೆಬ್ಬಾಳ ಮುಂತಾದೆಡೆ ಹನಿ ಮಳೆಯಾಗಿದ್ದು, ಇನ್ನಷ್ಟು ಮೋಡವಿರುವ ಕಾರಣ ಇನ್ನೂ ಮಳೆಯಾಗುವ ಸೂಚನೆಯಿದೆ.
ಬಿಸಲಿನಿಂದ ಕಾದ ಭೂಮಿಗೆ ಮಳೆ ನೀರು ಪನ್ನೀರು ಹಾಕಿದಂತಾಗಿದೆಯಷ್ಟೇ. ಆದರೆ ನಿರೀಕ್ಷೆಯಂತೇ ಮುಂಗಾರು ಪೂರ್ವ ಮಳೆಯಾಗಿದ್ದು ನೋಡಿದರೆ ಹವಾಮಾನ ವರದಿಗಳು ಹೇಳಿದಂತೇ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಹೆಚ್ಚಾಗಿದೆ.