Publish Date: Mon, 10 Mar 2025 (08:49 IST)
Updated Date: Mon, 10 Mar 2025 (08:53 IST)
ಬೆಂಗಳೂರು: ಕರ್ನಾಟಕದಲ್ಲಿ ಕಡು ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ತಂಪೆರಗಲು ವರುಣನ ಆಗಮನವಾಗುತ್ತಿದೆ. ಈ ದಿನದಿಂದ ಈ ದಿನದವರೆಗೆ ಮಳೆಯಾಗಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ರಾಜ್ಯದಲ್ಲಿ ಕಳೆದ ವಾರವಿಡೀ ವಿಪರೀತ ಬಿಸಿಲು, ಸೆಖೆಯ ವಾತಾವರಣವಿತ್ತು. ತಾಪಮಾನ ರಾಜ್ಯಾದ್ಯಂತ ಸರಾಸರಿ 35 ರಿಂದ 40 ಡಿಗ್ರಿಯವರೆಗೂ ಇತ್ತು. ಆದರೆ ಸತತ ಉರಿಬಿಸಿಲಿನಿಂದ ತತ್ತರಿಸಿದ್ದ ಜನಕ್ಕೆ ಈಗ ಮಳೆಯ ಸುದ್ದಿ ನೆಮ್ಮದಿ ನೀಡಲಿದೆ.
ಹವಾಮಾನ ವರದಿಗಳ ಪ್ರಕಾರ ಈ ವಾರ ಎರಡರಿಂದ ಮೂರು ದಿನಗಳವರೆಗೆ ಸಣ್ಣ ಮಟ್ಟಿಗೆ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಾಳೆಯಿಂದ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ.
ಬೆಂಗಳೂರು, ಮಂಡ್ಯ, ಮೈಸೂರು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಂಗಳವಾರ ಮಳೆಯಾಗುವ ಸೂಚನೆಯಿದೆ. ಇನ್ನು, ವಿಪರೀತ ಬಿಸಿಲು, ಉಷ್ಣ ಅಲೆಯಿಂದ ತತ್ತರಿಸಿರುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುರುವಾರ ಮತ್ತು ಶನಿವಾರ ಮಳೆಯ ಸೂಚನೆಯಿದೆ. ಆದರೆ ರಾಯಚೂರು, ಬಳ್ಳಾರಿಯಂತಹ ಉತ್ತರದ ರಾಜ್ಯಗಳಲ್ಲಿ ಯಥಾ ಪ್ರಕಾರ ಬಿಸಿಲಿನ ವಾತಾವರಣ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.